ರಾಣೆಬೆನ್ನೂರು: ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನಿಸಿದ ಹಲಗೇರಿ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯ ಶಿಕ್ಷಕ ಮೆಹಬೂಬ್ ಅಲಿ ಬೆಂಗಳೂರು ಅವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ವಿ.ಎಂ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದೇವೆಂದ್ರಪ್ಪ ಮಾಕನೂರು ಮಾತನಾಡಿ, ‘ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಪವಿತ್ರ ಶಿಕ್ಷಣ ಕ್ಷೇತ್ರದಲ್ಲಿಯೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಪಾಠ ಹೇಳಿ ಕೊಡುವ ಶಿಕ್ಷಕರೇ ಅತ್ಯಾಚಾರದಂತಹ ನೀಚ ಕೆಲಸಕ್ಕೆ ಇಳಿದರೆ ವಿದ್ಯಾರ್ಥಿಗಳ ಗತಿ ಏನು ಎಂದು ಪ್ರಶ್ನಿಸಿದರು. ವಿದ್ಯಾರ್ಥಿನಿಯರ ಮೇಲೆ ಕಾಮುಕತನ ತೋರುವ ಇಂತಹ ಶಿಕ್ಷಕರನ್ನು ಮೊದಲು ಇಲಾಖೆಯ ಸೇವೆಯಿಂದ ವಜಾ ಮಾಡಬೇಕು. ಅಲ್ಲದೇ ಇಂತಹ ಶಿಕ್ಷಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
ಈರಣ್ಣ ಪುರದ, ಆನಂದ ದೇಶಿ, ತೇಜಸ್ಸು ಹೊಸಳ್ಳಿ, ಸಂತೋಷ ಚೌಟಗಿ, ಸ್ವಪ್ನಾ ಜಾಧವ, ಕೆ.ಗಣೇಶ, ಸಂತೋಷ ಬ್ಯಾಡಗಿ, ಶ್ರೀಕಾಂತ ಬಾವಿಹಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎಸ್ಎಫ್ಐ ಒತ್ತಾಯ
ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನ ಹಲಗೇರಿಯ ಉರ್ದು ಶಾಲೆಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿದ ಉರ್ದು ಶಾಲೆಯ ಮುಖ್ಯ ಶಿಕ್ಷಕನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ವಿದ್ಯಾರ್ಥಿನಿಯರ ಉಪಸಮಿತಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿನಿಯನ್ನು ಲೈಂಗಿಕತೆಗೆ ಬಳೆಸಿಕೊಳ್ಳಲು ಯತ್ನಿಸಿದ ಘಟನೆ ಅಮಾನವೀಯ. ಅಲ್ಲದೇ, ಇದರಿಂದ ಇಡೀ ಶಿಕ್ಷಕ ಸಮುದಾಯ ತಲೆ ತಗ್ಗಿಸುವಂತಾಗಿದೆ. ಈ ಕೂಡಲೇ ಕಾಮುಕ ಶಿಕ್ಷಕನನ್ನು ಹುದ್ದೆಯಿಂದ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಮಾಜಕ್ಕೆ ಬುದ್ದಿ ಹೇಳವ ಮತ್ತು ಮಕ್ಕಳಿಗೆ ಪಾಠದ ಮೂಲಕ ಅವರನ್ನು ಸರಿಯಾದ ದಾರಿಯಲ್ಲಿ ನಡೆಸುವ ಶಿಕ್ಷಕನೇ ಇಂತಹ ಹೀನ ಕೃತ್ಯಕ್ಕೆ ಮುಂದಾಗಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಮಾಡಿದೆ. ಆದ್ದರಿಂದ ಸರ್ಕಾರ ಮತ್ತು ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನಂತೆ ಎಲ್ಲ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಲ್ಲಿ, ಜಿಲ್ಲಾಧಿಕಾರಿ, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿ ಮುಖಂಡರನ್ನು ಒಳಗೊಂಡ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆಗೆ ಮುಂದಾಗಬೇಕು. ಘಟನೆಯಲ್ಲಿ ನೊಂದ ವಿದ್ಯಾರ್ಥಿನಿಗೆ ತಕ್ಷಣ ನ್ಯಾಯ ಒದಗಿಸಬೇಕು.
ಇಲ್ಲದಿದ್ದರೇ, ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಸ್ಎಫ್ಐ ವಿದ್ಯಾರ್ಥಿನಿಯರ ಉಪಸಮಿತಿಯ ರಾಜ್ಯ ಸಂಚಾಲಕಿ ರೇಣುಕಾ ಕಹಾರ, ಮುಖಂಡರಾದ ಜ್ಯೋತಿ ದೊಡ್ಮನಿ, ಶಾಂತಾ, ಜಿಲ್ಲಾ ಅಧ್ಯಕ್ಷ ಬಸವರಾಜ ಪೂಜಾರ, ಸುಭಾಷ್ ಎಂ., ರಾಘವೇಂದ್ರ, ಮಲ್ಲೇಶ, ಮಲ್ಲಿಕಾರ್ಜುನ, ಅಲ್ತಾಪ, ವಿನಾಯಕ, ವಸಂತ, ಮಂಜುನಾಥ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.