ADVERTISEMENT

ಮೂಲ ಸೌಲಭ್ಯಗಳಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 7 ಮೇ 2012, 8:15 IST
Last Updated 7 ಮೇ 2012, 8:15 IST

ಹಾನಗಲ್: `ತಾಲ್ಲೂಕಿನ ಗುಡ್ಡಗಾಡು ಭಾಗದ 14 ಗ್ರಾಮಗಳು ಆಪ್ಪರ್ ತುಂಗಾ ಯೋಜನೆಯ ಸೌಲಭ್ಯಕ್ಕೆ ಒಳಪಡುತ್ತಿದ್ದು, ಈ ಯೋಜನೆ ಯಡಿಯಲ್ಲಿ ಬರುವ ಹಿಂದುಳಿದ ವರ್ಗದವರು ವಾಸಿಸುವ ಎಲ್ಲ ಹಳ್ಳಿಗಳಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ~ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಹೇಳಿದರು.

ಹಾನಗಲ್ ತಾಲ್ಲೂಕಿನ ಹಿರೇ ಬಾಸೂರ ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡ, ವರ್ಗದ ಕಾಲೊನಿಗಳ ಸುಧಾರಣೆ ಕಾಮಗಾರಿ ಅಡಿಯಲ್ಲಿ ರೂ. 50 ಲಕ್ಷದ ಕಾಂಕ್ರಿಟ್ ರಸ್ತೆ ಕಾಮಗಾರಿ, ಎನ್.ಎಚ್.ಎಮ್ ಯೋಜನೆಯ ರೂ  20 ಲಕ್ಷ ವೆಚ್ಚದ ಕಿರಿಯ ಮಹಿಳಾ ಆರೋಗ್ಯ ಸಹಾಯಕರ ಉಪಕೇಂದ್ರ ಕಟ್ಟಡದ ಅಡಿಗಲ್ಲು, ರೂ. 31 ಲಕ್ಷ ವೆಚ್ಚದ ಸರಕಾರಿ ಪ್ರೌಢಶಾಲೆ ಕಟ್ಟಡ, ಶಾಸಕರ ಪ್ರದೇಶಾಭಿವೃದ್ಧಿ ಅನು ದಾನದಲ್ಲಿ ರೂ. 5 ಲಕ್ಷದ ಸಮುದಾಯ ಭವನ ಕಟ್ಟಡ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಸೈಕಲ್ ವಿತರಣೆ ಮತ್ತು ಮಧ್ಯಾಹ್ನದ ಬಿಸಿಯೂಟದ ಪರಿಣಾಮ ಹೆಚ್ಚಿನ ವಿದ್ಯಾರ್ಥಿ ನಿಲಯಗಳ ಅಗತ್ಯತೆ ಕಂಡು ಬರುತ್ತಿಲ್ಲ. ತುಂಗಾ ಮೇಲ್ದಂಡೆ ಯೋಜನೆ, ಬಸಾಪೂರ, ತಿಳವಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗಳು ಭರದಿಂದ ಸಾಗಿದ್ದು ಕೆಲವೇ ತಿಂಗಳಲ್ಲಿ ರೈತರ ಭೂಮಿಗೆ ನೀರುಣಿಸಲಿವೆ ಎಂದು ಸಚಿವ ಉದಾಸಿ ವಿವರಿಸಿದರು.

ಗ್ರಾಮ ಸಭೆಗಳ ಮೂಲಕ ಫಲಾನುಭವಿಗಳ ಆಯ್ಕೆ ನಡೆಯುವಲ್ಲಿ ಸಾಮರಸ್ಯದ ಕೊರತೆಯಿಂದಾಗಿ ವಿಳಂಬವಾಗುತ್ತಿದೆ. ಮನೆ ಹಂಚಿಕೆಯ ವಿಷಯದಲ್ಲಿ ತಾಲ್ಲೂಕಿನ 40 ಗ್ರಾ.ಪಂ ಗಳಲ್ಲಿ ಕೇವಲ 35 ಗ್ರಾ.ಪಂಗಳು ಮಾತ್ರ ಫಲಾನುಭವಿಗಳ ಆಯ್ಕೆ ಪೂಣ ಗೊಳಿಸಿವೆ. ಜನರು ಸಹಕಾರ ನೀಡಿದರೆ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯವಿದೆ ಎಂದ ಉದಾಸಿ ಹೇಳಿದರು.

ಆರ್ಥಿಕ ವಿಕಾಸಕ್ಕೆ ವಿದ್ಯೆ, ನೀರಾವರಿ ಮತ್ತು ವಿದ್ಯುತ್ ಪ್ರಮುಖ ಅಂಶ ಗಳಾಗಿದ್ದು, ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಮುಂದುವರೆಯುತ್ತಿದೆ. ಯಡಿ ಯೂರಪ್ಪ ಅವರ ಅಭಿವೃದ್ಧಿ ಪರ ಕಳಕಳಿ ಯಿಂದ  ರಾಜ್ಯ ಲಕ್ಷ ಕೋಟಿ ಮುಂಗಡ ಪತ್ರ ಕಂಡಿದೆ ಎಂದು ಸಿ.ಎಂ.ಉದಾಸಿ ಹೇಳಿದರು.

ಜಿ.ಪಂ ಸದಸ್ಯ ಬಸವರಾಜ ಹಾದಿಮನಿ ಮಾತನಾಡಿ, ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ವೈರತ್ವದ ರಾಜಕಾರಣ ಬೇಡ ಎಂದು ಹೇಳಿದರು. 

ನೈರ್ಮಲ್ಯದ ವಿಷಯದಲ್ಲಿ ಅಲಕ್ಷ್ಯ, ಸ್ವಚ್ಛತೆ ಕೊರತೆಯಿಂದಾಗಿ ಇತ್ತೀಚೆಗೆ ಇದೇ ಗ್ರಾಮದಲ್ಲಿ ಮೂವರು ಸಾವಿಗೀಡಾಗಿದ್ದಾರೆ.  ಮುಂದಿನ ದಿನಗಳಲ್ಲಿ ನೈರ್ಮಲ್ಯಕ್ಕೆ ಗಮನ ಹರಿಸಬೇಕಾಗಿದೆ ಎಂದು  ಹೇಳಿದರು.

  ತಾ.ಪಂ ಸದಸ್ಯೆ ವಿಜಯಾ ಹಿರೇಮಠ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳ ವಿವರಣೆಗಳು ಆಯಾ ಕ್ಷೇತ್ರದ ಜನಪ್ರತಿನಿಧಿಗಳಿಗೆ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾ.ಪಂ ಅಧ್ಯಕ್ಷೆ ಲಲಿತವ್ವ ಹಿರೇಮಠ, ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಗಣ್ಯರಾದ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಶಿವಲಿಂಗಪ್ಪ ತಲ್ಲೂರ,, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ನಿಂಗಪ್ಪ ಕೊಪ್ಪದ, ಈಶ್ವರಪ್ಪ ದೇಸಾಯಿ ಭಾಗವಹಿಸಿದ್ದರು. ಗ್ರಾ.ಪಂ ಅಧ್ಯಕ್ಷ ಶಂಕ್ರಪ್ಪ ತೋಟಗೇರ ಅಧ್ಯಕ್ಷತೆ ವಹಿಸಿದ್ದರು, ವೈ.ಟಿ ಜಾಡರ ಸ್ವಾಗತಿಸಿದರು. ಸುರೇಶ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.