ಹಾವೇರಿ: ನಗರದ ಬೀದಿಗಳಲ್ಲಿ ಸೋಮವಾರ ‘ಕಿತ್ತೂರಿನ ವೈಭವ’ ಮರುಕಳಿಸಿತು. ಚನ್ನಮ್ಮ ಶೌರ್ಯ, ದೇಶಪ್ರೇಮ, ಸಾಹಸ, ಆಡಳಿತ, ಕಲಾ ಪೋಷಣೆಯು ಜನತೆ ಕಣ್ಣ ಮುಂದೆ ಸಾಗಿಬಂತು
ಅದು ಕಿತ್ತೂರ ಚನ್ನಮ್ಮ ಜಯಂತಿ ಅಂಗವಾಗಿ ಸೋಮವಾರ ನಗರದ ಹಾನಗಲ್ ರಸ್ತೆಯ ಎ.ಪಿ.ಎಂ.ಸಿ. ಮಾರುಕಟ್ಟೆಯಿಂದ ಹುಕ್ಕೇರಿಮಠದ ಶಿವಾನುಭವ ಮಂಟಪದ ತನಕ ನಡೆದ ಅದ್ದೂರಿ ಮೆರವಣಿಗೆಯ ಚಿತ್ರಣ.
ಸ್ತಬ್ಧ ಚಿತ್ರಗಳ ಮೂಲಕ ಮರುಸೃಷ್ಟಿಸಿದ ಕಿತ್ತೂರ ಸಂಸ್ಥಾನ, ಚನ್ನಮ್ಮ ಅವರ ಹೋರಾಟದ ದೃಶ್ಯಾವಳಿಗಳು ಇತಿಹಾಸವು ಕಣ್ಣೆದೆರೇ ಅವತರಿಸಿದಂತಹ ಅನುಭವ ನೀಡಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಳಿಗ್ಗೆ ಆರಂಭಗೊಂಡ ಮೆರವಣಿಗೆಯಲ್ಲಿನ ಕಿತ್ತೂರ ಚನ್ನಮ್ಮನ ಕೋಟೆಯ ಸ್ತಬ್ಧ ಚಿತ್ರ, ಕಿತ್ತೂರ ಚನ್ನಮ್ಮನ ವೇಷಧಾರಿ, ಸೈನ್ಯಾಧಿಪತಿಗಳು, ಕಾಲ್ದಳದ ಸೈನಿಕರು, ಅಶ್ವದಳ, ಆನೆ, ಒಂಟೆ, ಕುದುರೆ, ಛತ್ರಿ, ಚಾಮರಗಳು ರಾಜ ವೈಭವವನ್ನು ಕಣ್ಣೆದುರು ಸೃಷ್ಟಿಸಿತು.
ಅಷ್ಟೇ ಅಲ್ಲದೇ, ಮೆರವಣಿಗೆಯುದ್ದಕ್ಕೂ ಮಹಿಳೆಯ ಝಾಂಜ್ ಮೇಳ, ಹಲಿಗೆ ತಂಡ, ಡೊಳ್ಳು ಕುಣಿತ, ಕೀಲು ಕುದುರೆಗಳು, ಗೊಂಬೆಗಳು ಹಾಗೂ ಯುವಕರ ಝಾಂಜ್ ಮೇಳ, ಸಂಗೀತ ರಸಮಂಜರಿ, ವಿವಿಧ ವಾದ್ಯ ಪರಿಕರಗಳ ಜೊತೆಗೆ ವಿಜೃಂಭಣೆಯ ಮೆರವಣಿಗೆ ಸಾಗಿ ಬಂತು
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲ್ಲೂಕು ಘಟಕಗಳ ಸ್ತಬ್ಧ ಚಿತ್ರಗಳೂ ಮೆರವಣಿಗೆಯ ಉದ್ದಕ್ಕೂ ಸಾಗಿದವು. ಮೆರವಣಿಗೆಯು ಹೊಸಮನಿ ಸಿದ್ದಪ್ಪನ ವೃತ್ತ, ವೀರಭದ್ರೇಶ್ವರ ದೇವಸ್ಥಾನ, ಗಾಂಧಿ ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಹುಕ್ಕೇರಿಮಠದ ಶಿವಾನುಭವ ಮಂಟಪವನ್ನು ಸಂಜೆ 4.30ಕ್ಕೆ ತಲುಪಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.