ADVERTISEMENT

ಯೋಜನೆಗಳ ಅರಿವು ಅಗತ್ಯ: ಸಚಿವ ಉದಾಸಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 8:55 IST
Last Updated 13 ಅಕ್ಟೋಬರ್ 2011, 8:55 IST

ಬ್ಯಾಡಗಿ: ಜನತೆಗೆ ಸರ್ಕಾರದ ಎಲ್ಲ ಯೋಜನೆಗಳ ಅರಿವು ಮೂಡಿದಾಗ ಮಾತ್ರ ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಹೇಳಿದರು. 

 ಬುಧವಾರ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತ ಸರಕಾರದ ವಾರ್ತಾ ಶಾಖೆ, ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯ, ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ ಸಹಯೋಗದೊಂದಿಗೆ ಬುಧವಾರದಿಂದ ಮೂರು ದಿನ  ನಡೆಯುವ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

  ಪ್ರತಿಯೊಬ್ಬ ವ್ಯಕ್ತಿ ಸರ್ಕಾರದ ಯೋಜನೆಗಳ ಮಾಹಿತಿ ಪಡೆದುಕೊಳ್ಳಬೇಕಾಗಿರುವುದು ಅವಶ್ಯವಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಅರಿವು ಮೂಡಿಸುವ, ಸಂಪರ್ಕ ಕಲ್ಪಿಸುವ ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ನೀಡುವ ಮೂಲಕ ಸಮುದಾಯವನ್ನು ಸಬಲೀಕರಣಗೊಳಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದರು.

 ವಸ್ತು ಪ್ರದರ್ಶನದ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿದ ಸಂಸದ ಶಿವಕುಮಾರ ಉದಾಸಿ, ಅವರು ದೇಶದಲ್ಲಿ ಸಾಮಾಜಿಕ ನ್ಯಾಯ ಹಾಗೂ ಎಲ್ಲರ  ಅಭಿವೃದ್ಧಿ-ಸಾಧನೆಯ ಭರವಸೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಈಗಾಗಲೆ ಕೈಕೊಂಡ ಕೆಲವು ಕಾರ್ಯಕ್ರಮಗಳ ದಕ್ಷತೆ ಹೆಚ್ಚಿಸಿ ಅವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.

 ಶಾಸಕ ಸುರೇಶಗೌಡ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಅಧ್ಯಕ್ಷ ಮಂಜುನಾಥ ಓಲೇಕಾರ, ಉಪಾಧ್ಯಕ್ಷೆ ಗದಿಗೆಮ್ಮ ಬಸನಗೌಡ್ರ, ಸದಸ್ಯ ಶಂಕ್ರಣ್ಣ ಮಾತನವರ, ತಾ.ಪಂ ಅಧ್ಯಕ್ಷ ಚನ್ನಬಸಪ್ಪ ದೇಸಾಯಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕರಲಿಂಗಪ್ಪನವರ, ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆರ್.ಪಾಟೀಲ, ಪುರಸಭೆ ಅಧ್ಯಕ್ಷೆ ಪಾರ‌್ವತೆವ್ವ ಕೊಪ್ಪದ ಉಪಾಧ್ಯಕ್ಷ ಬಸವರಾಜ ಹಂಜಿ, ಜಿ.ಪಂ ಸದಸ್ಯ ಶಂಕ್ರಣ್ಣ ಮಾತನವರ, ವಿ.ವಿ.ಹಿರೇಮಠ, ಡಿಎವಿಪಿ ಕ್ಷೇತ್ರ ಪ್ರದರ್ಶನಾಧಿಕಾರಿ ಪಿ.ಜಿ.ಪಾಟೀಲ, ಭಾರತ ಸರಕಾರದ ವಾರ್ತಾ ಶಾಖೆಯ ವಿಜಯ ಸಾರಥಿ ಉಪಸ್ಥಿತರಿದ್ದರು. ಪಿಐಬಿಯ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಂಟಿ ನಿರ್ದೇಶಕ ಜಿ.ಕೆ.ಪೈಸ್ವಾಗತಿಸಿದರು. ತಹಶೀಲ್ದಾರ ರಾಜಶೇಖರ ಡಂಬಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.