ರಾಣೆಬೆನ್ನೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಯಾವ ಕಾರಣಕ್ಕೂ ಹಿಂಪಡೆಯಬಾರದು’ ಎಂದು ಒತ್ತಾಯಿಸಿ ಭಾರತ ರಾಷ್ಟ್ರೀಯ ಕ್ರಾಂತಿಸೇನಾ ಅಧ್ಯಕ್ಷ ಹಾಗೂ ಶರಣಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದರಾಮ ಸ್ವಾಮೀಜಿ ಶನಿವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪ್ರಣವಾನಂದರಾಮ ಸ್ವಾಮೀಜಿ, ‘ಕೇಂದ್ರ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ನಿರ್ಧರಿಸುವ ಮೂಲಕ ಚುನಾವಣೆಗೂ ಮೊದಲು ನೀಡಿದ್ದ ಭರವಸೆ ಈಡೇರಿಸಿದೆ. ಆದರೆ, ಕೆಲ ವಿರೋಧಿಗಳು ಈ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿರೋಧ ಉದ್ದೇಶ ಪೂರ್ವಕವಾಗಿದೆ. ಅದು ಸಲ್ಲದು’ ಎಂದರು.
‘ಉದ್ದೇಶಿತ ಕಾಯ್ದೆಯ ಅನುಷ್ಠಾನದಿಂದ ಸಾವಿರರು ಕೋಟಿ ರೂಪಾಯಿ ನಷ್ಟವಾದರೂ ದೇವರೆಂದು ಪೂಜಿಸುತ್ತಿರುವ ಗೋವುಗಳ ರಕ್ಷಣೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ’ ಎಂದರು.
‘ಈ ಐತಿಹಾಸಿಕ ಕಾಯ್ದೆಯನ್ನು ಕಾಂಗ್ರೆಸ್ನವರು ಉದ್ದೇಶ ಪೂರ್ವಕವಾಗಿ ವಿರೋಧಿಸುತ್ತಿರುವುದುಸರಿಯಲ್ಲ. ಹಿಂದೂ ಧರ್ಮದ ಏಳಿಗೆ ಮತ್ತು ಗೋ ಸಂರಕ್ಷಣೆಯ ಹಿತದೃಷ್ಟಿಯಿಂದ ಇದಕ್ಕೆ ಎಲ್ಲ ಪಕ್ಷಗಳು ಪಕ್ಷ ಭೇದ ಮರೆತು ಸಹಕಾರ ನೀಡಬೇಕು’ ಎಂದು ಆಗ್ರಹಿಸಿದರು. ಬಂಜಾರ ಸಮಾಜದ ಸೇವಾಲಾಲ್ ಸರದಾರಜಿ ಶ್ರೀಗಳು, ಸೇನೆಯ ರಾಷ್ಟ್ರೀಯ ಕಾರ್ಯದರ್ಶಿ ಅಂಕಿತ ಜೈನ್ ಅವರು ಸ್ವಾಮೀಜಿಗೆ ಸಾಥ್ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.