ADVERTISEMENT

ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸೌಕರ್ಯದ ಕೊರತೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2011, 8:00 IST
Last Updated 24 ಜೂನ್ 2011, 8:00 IST
ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸೌಕರ್ಯದ ಕೊರತೆ
ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸೌಕರ್ಯದ ಕೊರತೆ   

ಗುತ್ತಲ: ಗ್ರಾಮೀಣ ವಿದ್ಯಾರ್ಥಿನಿಯರ ಶೈಕ್ಷಣಿಕ ಅಭಿವೃದ್ಧಿಯ ಸದುದ್ದೇಶ ದಿಂದ ಆರಂಭವಾದ ಇಲ್ಲಿಯ ರಾಣಿ ಚನ್ನಮ್ಮ ವಸತಿ ಶಾಲೆ ಈಗ ಮೂಲ ಸೌಕರ್ಯಕ್ಕಾಗಿ ಮೊರೆ ಇಡುತ್ತಿದೆ.ಎರಡು ವರ್ಷಗಳ ಹಿಂದೆ ಆರಂಭವಾದ ರಾಣಿ ಚೆನ್ನಮ್ಮ ವಸತಿ ಶಾಲೆ ಈವರೆಗೂ ಸ್ವಂತ ಕಟ್ಟಡ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಗಳಿಂದ ವಂಚಿತವಾಗಿದೆ.

ಸದ್ಯಕ್ಕೆ ಗ್ರಾಮದ ಎಪಿಎಂಸಿ ಆವರಣದಲ್ಲಿರುವ ಒಂದೇ ಗೋದಾಮಿನಲ್ಲಿ ತರಗತಿಗಳು ನಡೆಯುತ್ತಿದ್ದು, ತರಗತಿಯಲ್ಲಿಯೇ ವಿದ್ಯಾರ್ಥಿನಿಯರಿಗೆ ವಸತಿ ಕಲ್ಪಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿನಿಯರು ತರಗತಿ ಕೋಣೆಯಲ್ಲಿಯೇ ತಂಗುವ ಅನಿವಾರ್ಯ ಎದುರಾಗಿದೆ. ಶಾಲೆ ಆರಂಭವಾಗಿ ಎರಡು ವರ್ಷ ಕಳೆದರೂ ಸರ್ಕಾರ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲ ವಾಗಿದೆ ಎಂಬುದು ಗುತ್ತಲ ಗ್ರಾಮಸ್ಥರ ಆರೋಪ.

6, 7 ಮತ್ತು 8ನೇ ತರಗತಿಗಳಿಗೆ ಒಟ್ಟು 150 ವಿದ್ಯಾರ್ಥಿನಿಯರು ಪ್ರವೇಶ ಪಡೆಯಬಹುದಾಗಿದ್ದರೂ, ಮೂಲ ಸೌಕರ್ಯಗಳ ಕೊರತೆ ಯಿಂದಾಗಿ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಮೂರು ತರಗತಿಗಳಲ್ಲಿ 105 ವಿದ್ಯಾರ್ಥಿನಿಯರು ಮಾತ್ರ ಪ್ರವೇಶ ಪಡೆದಿದ್ದು, ಪ್ರವೇಶ ಪಡೆದ ವಿದ್ಯಾರ್ಥಿನಿಯರೂ ವರ್ಷ ಪೂರ್ಣ ಗೊಳಿಸದೇ ಹೊರ ನಡೆಯುತ್ತಿದ್ದಾರೆ.

ಶಾಲೆಯಲ್ಲಿ ಏಳು ಜನ ಬೋಧಕ ಹಾಗೂ ಏಳು ಜನ ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಶಾಲೆಗೆ ಈವರೆಗೆ ಕಾಯಂ ವಾರ್ಡನ್ ಇಲ್ಲ. ಈಗಿರುವ ಆಂಜನೇಯ ಹುಲ್ಯಾಳ ಶಾಲೆಗೆ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದರಿಂದ ಮಕ್ಕಳ ಕುಂದು ಕೊರತೆಗಳನ್ನು ಆಲಿಸಲು ಅಡುಗೆ ಯವರನ್ನು ಹೊರತು ಪಡಿಸಿ ಯಾರು ಇರುವುದಿಲ್ಲ.ಈ ಕುರಿತು ಆಂಜನೇಯ ಅವರನ್ನು ಸಂಪರ್ಕಿಸಿದಾಗ, ತರಗತಿಗಳನ್ನು ನಡೆಸಲು ಖಾಸಗಿ ಕಟ್ಟಡವೊಂದನ್ನು ಬಾಡಿಗೆ ಪಡೆಯಲಾಗಿದೆ. ಇನ್ನೊಂದು ವಾರದಲ್ಲಿ ತರಗತಿಗಳು ಅಲ್ಲಿಗೆ ಸ್ಥಳಾಂತರವಾಗಲಿವೆ ಎಂದು ತಿಳಿಸಿದರು.

ಸ್ವಂತ ಕಟ್ಟಡವಾಗುವವರೆಗೂ ಸೂಕ್ತ ಕಟ್ಟಡವನ್ನು ಬಾಡಿಗೆ ಪಡೆದು ಶಾಲೆಗೆ ಮೂಲ ಸೌಕರ್ಯ ಒದಗಿಸುವಂತೆ ಗುತ್ತಲದ ಅಜ್ಜಯ್ಯ ರಿತ್ತಿಮಠ ಆಗ್ರಹಿಸಿದ್ದಾರೆ.ಶಾಲೆ ಆರಂಭವಾಗಿ ಎರಡು ವರ್ಷ ಕಳೆದರೂ ಕಟ್ಟಡ ನಿರ್ಮಿಸಲು ಈವರೆಗೂ ಸ್ಥಳ ನಿಗದಿಯಾಗಿಲ್ಲ.
 

ನೆಗಳೂರು ಮೊರಾರ್ಜಿ ವಸತಿ ಶಾಲೆಯ ಪಕ್ಕದಲ್ಲಿರುವ ಸರ್ಕಾರಿ ಜಾಗೆ ಅಥವಾ ಗುತ್ತಲ-ಹೊಸರಿತ್ತಿ ಮಧ್ಯೆ ಇರುವ ಸರ್ಕಾರಿ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದ್ದರೂ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಸ್ಥಳ ನಿಗದಿ ಮಾಡಲು ಆದೇಶ ನೀಡಿಲ್ಲ.

ರಾಣಿ ಚೆನ್ನಮ್ಮ ವಸತಿ ಶಾಲೆ ಸ್ಥಾಪಿಸಲು ಗುತ್ತಲ-ಹೊಸರಿತ್ತಿ ಮಧ್ಯದ ಸ್ಥಳ ಸೂಕ್ತವಾಗಿದ್ದು, ಜಿಲ್ಲಾಧಿಕಾರಿಗಳು ಇದನ್ನು ಆಯ್ಕೆ ಮಾಡಬೇಕೆಂದು ಸಿದ್ದರಾಜ ಕಲಕೋಟಿ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT