ADVERTISEMENT

ರೈತರನ್ನು ಭಿಕ್ಷುಕರನ್ನಾಗಿ ಮಾಡಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 8:05 IST
Last Updated 11 ಜೂನ್ 2011, 8:05 IST

ಹಾವೇರಿ: `ಸರ್ಕಾರಗಳು ರೈತರನ್ನು ಹಾಗೂ ಕೃಷಿಯನ್ನು ಬಲಿಷ್ಠಗೊಳಿಸುವ ಬದಲು ಅಲ್ಪ ಸ್ವಲ್ಪ ಸಬ್ಸಿಡಿ, ಸಹಾಯ ಧನ ನೀಡುವ ಮೂಲಕ ಭಿಕ್ಷಕರನ್ನಾಗಿ ಮಾಡಿವೆ~ ಎಂದು ಹಿರಿಯ ರೈತ ಮುಖಂಡ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶಿವಾನಂದ ಗುರುಮಠ ಆರೋಪಿಸಿದರು.

ನಗರದ ಕೇಂದ್ರ ಬಸ್ ನಿಲ್ದಾಣ ಬಳಿ ಇರುವ ಹುತಾತ್ಮ ವೀರ ಗಲ್ಲು ಎದುರು ಗೋಲಿಬಾರ್‌ನಲ್ಲಿ ಮೃತ ಪಟ್ಟ ರೈತರ ಸ್ಮರಣೆಗಾಗಿ ಶುಕ್ರವಾರ ಹಮ್ಮಿಕೊಂಡ ನಾಲ್ಕನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು.

ಪ್ರತಿಯೊಂದು ಸರ್ಕಾರಗಳಿಗೆ ರೈತ ಅಭಿವೃದ್ಧಿಯಾಗುವುದು ಬೇಕಿಲ್ಲ. ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ರೈತರ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿಲ್ಲ. ರೈತ ಬಿತ್ತುವ ಬೀಜ, ಗೊಬ್ಬರದಿಂದ ಹಿಡಿದು ಆತ ಬೆಳೆದ ಉತ್ಪನ್ನಗಳ ಮಾರಾಟ ಮಾಡು ವವರೆಗೆ ಹೋರಾಟ ಮಾಡ ಬೇಕಾದ ಅನಿವಾರ್ಯತೆಯಿದೆ. ಇದು ಹೀಗೆ ಮುಂದುವರಿದರೆ, ರೈತ ಕೃಷಿಯಿಂದ ದೂರ ಸರಿಯುವ ದಿನಗಳ ದೂರಿಲ್ಲ ಎಂದರು.

ಪ್ರಸ್ತು ರಾಜಕೀಯ ವ್ಯವಸ್ಥೆಯಿಂದ ಬೀಜ, ಗೊಬ್ಬರ ಮಾರಾಟ ಮಾಡುವ ವರು, ರೈತರು ಬೆಳೆದ ಉತ್ಪನ್ನ ಮಾರಾಟ ಮಾಡುವವರು ಶ್ರೀಮಂತರಾ ಗಿದ್ದಾರೆ. ಆದರೆ, ವರ್ಷಪೂರ್ತಿ ಬೆವರು ಸುರಿಸಿ ದುಡಿಯುವ ರೈತ ಮಾತ್ರ ಸಾಲ ಮಾಡಿ ಆತ್ಮಹತ್ಯೆ ದಾರಿ ಹಿಡಿಯು ವಂತಾಗಿದೆ. ರೈತ ಕೃಷಿಯನ್ನು ಬಿಟ್ಟು ಬಿಟ್ಟರೆ, ದೇಶ ಆಹಾರಕ್ಕಾಗಿ ಪರದಾಡ ಬೇಕಾಗುತ್ತದೆ. ಅದಕ್ಕಾಗಿ ರೈತ ತನ್ನ ಮನಸ್ಸು ಕಠೋರ ಮಾಡಿಕೊಳ್ಳುವ ಮೊದಲು ಸರ್ಕಾರಗಳ ಆತನ ಪರಿಸ್ಥಿತಿ ಸುಧಾರಣೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈಗಾಗಲೇ ಫಲವತ್ತಾದ ಕೃಷಿ ಭೂಮಿ ಕೈಗಾರಿಕೆಗಳ ಪಾಲಾಗುತ್ತಿವೆ. ಸರ್ಕಾರಗಳು ರೈತರಿಗೆ ಬೇಕಾದ ಸೌಲಭ್ಯಗಳನ್ನು ನೀಡದೇ ಅವರಾಗಿಯೇ ಭೂಮಿಯನ್ನು ಬಿಟ್ಟುಕೊಡುವಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ, ದೇಶ ಅತೀ ಶೀಘ್ರದಲ್ಲಿ ಆಹಾರದ ಕೊರತೆ ಎದು ರಿಸಲಿದೆ. ಅದಕ್ಕಾಗಿ ಕೈಗಾರಿಕೆಗಳಿಗೆ ಭೂಮಿ ವಶಪಡಿಸಿಕೊಳ್ಳುವ ಮುನ್ನ ಸರ್ಕಾರಗಳು ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕೆಂದು ಸಲಹೆ ಮಾಡಿದರು.

ಪ್ರಸ್ತುತ ದಿನಗಳಲ್ಲಿ ದುಡ್ಡಿನಿಂದ ಎನನ್ನಾದರೂ ಮಾಡಬಹುದು ಎಂಬ ಸ್ಥಿತಿ ನಿರ್ಮಾಣ ಮಾಡಲಾಗಿದೆ. ಊರಿನ ಮುಖವನ್ನೇ ನೋಡದ ರಾಜಕಾರಣಿ ಗಳು ಬಂದು ದುಡ್ಡು ಹಂಚಿ ಚುನಾ ವಣೆಯಲ್ಲಿ ಗೆದ್ದು ಬರುತ್ತಿದ್ದಾರೆ. ನಿಜ ವಾಗಿಯೂ ಜನರ ಸಮಸ್ಯೆಗಳಿಟ್ಟು ಕೊಂಡು ಹೋರಾಟ ಮಾಡುವ ವ್ಯಕ್ತಿಗಳು ಮನೆ ಸೇರುತ್ತಿದ್ದಾರೆ ಎಂದ ಅವರು, ದೇಶದಲ್ಲಿ ಶೇ.5ರಷ್ಟು ಜನರ ಬಳಿಯೇ ದುಡ್ಡು, ಅಧಿಕಾರವಿದೆ. ಅವರೇ 95 ರಷ್ಟು ಜನರನ್ನು ನಿಯಂತ್ರಿ ಸುತ್ತಿದ್ದಾರೆ.  ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಹೇಳಿದರು.
ರೈತ ಸಂಘದ ಮತ್ತೊಬ್ಬ ಮುಖಂಡ ರಾಮಣ್ಣ ಕೆಂಚೆಳ್ಳೆರ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಸುಳ್ಳು, ಮೋಸ, ಕೊಲೆಗಾರ ಮುಖ್ಯ ಮಂತ್ರಿಯಾಗಿದ್ದಾರೆ. ರೈತ ಪರ ಮುಖ್ಯ ಮಂತ್ರಿ ಎಂದು ಹೇಳುತ್ತಲೇ ರೈತರನ್ನು ಗುಂಡಿಟ್ಟು ಕೊಂದ ಮುಖ್ಯಮಂತ್ರಿ ಎಂದು ಆರೋಪಿಸಿದರು.

ಜನರಿಂದ ಮತ ಪಡೆದು ಜನರಿಗಾಗಿ ಹೋರಾಡಬೇಕಾದ ವಿರೋಧ ಪಕ್ಷಗಳು ಅಧಿವೇಶನವನ್ನು ಬಹಿಷ್ಕರಿಸುವ ಮೂಲಕ ಜನಹಿತವನ್ನು ಮರೆತಿವೆ. ರಾಜ್ಯದಲ್ಲಿ ಬೀಜ ಗೊಬ್ಬರಕ್ಕಾಗಿ ಇಷ್ಟೊಂದು ಹಾಹಾಕಾರ ಇದ್ದರೂ ಆಡಳಿತರೂಢ ಸರ್ಕಾರ ಆ ಬಗ್ಗೆ ಒಂದೇ ಒಂದು ಮಾತು ಮಾತನಾಡುತ್ತಿಲ್ಲ. ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಜನರು ಅನಾಥವಾಗಿದ್ದಾರೆ. ರೈತರ ಗೋಳು ಕೇಳುವವರೇ ಇಲ್ಲ ದಂತಾಗಿದೆ ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ದಣ್ಣ ಬಿದರಿ, ಜಿ.ಎ. ಹಿರೇಮಠ, ಫಯಾಜ್ ದೊಡ್ಡಮನಿ, ಬಸನಗೌಡ ಗಂಗಪ್ಪ ನವರ, ಮಹೇಶ ಕೊಟೂರು, ರುದ್ರ ಮುನಿಸ್ವಾಮಿ, ರುದ್ರಪ್ಪ ಜಾಬಿನ, ಜಿ.ಎ. ಹಿರೇಮಠ, ಶಶಿಧರ ಸ್ವಾಮಿ ಛತ್ರಮಠ, ನಾರಾ ಯಣ ಕಾಳೆ, ಬಸವರಾಜ ಪೂಜಾರ ಸೇರಿದಂತೆ  ರೈತರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ರೈತ ಮುಖಂಡರು ಹುತಾತ್ಮ ರೈತರಾದ ಹಾವೇರಿಯ ಸಿದ್ದ ಲಿಂಗಪ್ಪ ಚೂರಿ ಹಾಗೂ ನೆಲೋಗಲ್ಲಿನ ಪುಟ್ಟಪ್ಪ ಹೊನ್ನತ್ತಿ ಅವರ ಸಮಾಧಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.