ಹಾವೇರಿ: ಶಾಸಕ ವರ್ತೂರ ಪ್ರಕಾಶ್ ‘ನಮ್ಮ ಕಾಂಗ್ರೆಸ್’ ಎಂಬ ಹೊಸ ಪಕ್ಷವನ್ನು ಸ್ಥಾಪಿಸುವುದಕ್ಕೆ ಮುಂದಾಗಿದ್ದಾರೆ. ಅವರು ಪಕ್ಷ ಸ್ಥಾಪಿಸಿದ ಮರುದಿನವೇ ಅವರ ಹಗರಣಗಳನ್ನು ದಾಖಲೆ ಸಹಿತ ಬಹಿರಂಗೊಳಿಸುತ್ತೇವೆ ಎಂದು ಭಾರತೀಯ ರಿಪಬ್ಲಿಕನ್ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಪಿಐ ವತಿಯಿಂದ ಮುಂಬರುವ 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು ಎಂದರು.
ರಾಜ್ಯದಲ್ಲಿ ಪಕ್ಷದ ಬಲವನ್ನು ಹೆಚ್ಚಿಸುವ ಉದ್ದೇಶದಿಂದ ಡಿ.28ರಿಂದ 2018ರ ಫೆಬ್ರುವರಿ 15ರ ವರೆಗೆ ಪ್ರತಿ ಜಿಲ್ಲೆಯಲ್ಲಿ ‘ಜನಾಧಿಕಾರಕ್ಕಾಗಿ ಜನಸಂಕಲ್ಪ ಜಾಥಾ’ವನ್ನು ಹಮ್ಮಿಕೊಳ್ಳಲಾಗಿದೆ. ಜಾಥಾವು ಕೋಲಾರ ಜಿಲ್ಲೆಯಿಂದ ಆರಂಭವಾಗಿ ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ ಎಂದರು.
ಕಾಂಗ್ರೆಸ್ ಮುಕ್ತ ಭಾರತ ಮಾಡುವುದೇ ನಮ್ಮ ಪಕ್ಷದ ಮುಖ್ಯ ಧ್ಯೇಯ. ಆದ್ದರಿಂದ, ಕೋಲಾರ ಜಿಲ್ಲೆಯಿಂದ ವರ್ತೂರ ಪ್ರಕಾಶ್ ವಿರುದ್ಧ ಕಣಕ್ಕಿಳಿಯುವೆ ಎಂದರು. ಸುದ್ದಿಗೋಷ್ಠಿಯಲ್ಲಿ ಆರ್ಪಿಐ ಬೆಳಗಾವಿ ವಿಭಾಗದ ಶಂಕರ ಎಲಿನೇತಿ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಂಡಿವಡ್ಡರ, ಎನ್.ಎನ್.ಗಾಳೆಮ್ಮನವರ, ರಮೇಶ ಚೌಹಾಣ, ಮೆಹಬೂಬಸಾಬ್ ಕರ್ಜಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.