ADVERTISEMENT

ಸಂಸ್ಕೃತಿಗೆ ಮಠಮಾನ್ಯಗಳ ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 8:20 IST
Last Updated 5 ಜನವರಿ 2012, 8:20 IST

ಹಾವೇರಿ: `ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ದೊರೆಯಲು ಹಾಗೂ ವಿಶಿಷ್ಟ ಸಂಸ್ಕೃತಿಯಾಗಿ ಹೊರಹೊಮ್ಮಲು ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ~ ಎಂದು ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ ನಾಗಮ್ಮನವರ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಲಿಂ. ಶಿವಬಸವ ಶ್ರೀಗಳ 66ನೇ ಹಾಗೂ ಲಿಂ. ಶಿವಲಿಂಗ ಶ್ರೀಗಳ 3ನೇ ಪುಣ್ಯ ದಿನಾಚರಣೆ ಹಾಗೂ ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀಮಠದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹಾವೇರಿ ನಗರದ ಹುಕ್ಕೇರಿಮಠವು ಪಾರಂಪರಿಕ ಹಾಗೂ ಸಾಂಸ್ಕೃತಿಕವಾಗಿ ಬಹಳ ಹಿರಿಮೆ ಹೊಂದಿದೆ. ಇಂತಹ ಮಠಗಳ ಸಂಸ್ಕೃತಿಗಳಿಂದಲೇ ಭಾರತವು ಸಾಂಸ್ಕೃತಿಕವಾಗಿ ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಸಂಸ್ಕೃತಿ ಸಾರ್ವತ್ರಿಕವಾಗಿ ಮುಂದುವರೆಯಬೇಕಾಗಿದೆ ಎಂದ ಅವರು ಹೇಳಿದರು.

ಅಂತೂರಬೆಂತೂರಿನ ಬೂದಿಸ್ವಾಮಿ ಹಿರೇಮಠದ ಕುಮಾರ ದೇವರು ಪ್ರವಚನ ನೀಡಿದರು. ಬಾಲೇಹೊಸೂರಿನ ದಿಂಗಾ ಲೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಹುಕ್ಕೇರಿಮಠದ ಸದಾಶಿವ ಶ್ರೀಗಳು, ಮಾದನ ಹಿಪ್ಪರಗಿ ಶಿವಲಿಂಗೇಶ್ವರಮಠದ ಮಹಾಂತದೇವರು ಸಮ್ಮುಖವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿ.ಜಿ.ಶೀಲವಂತರ ರಚಿತ `ಲಿಂಗಾಯತ ದರ್ಶನ~ ಗ್ರಂಥದ ಬಿಡುಗಡೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ ನಾಗಮ್ಮನವರ ಅವರನ್ನು ಸನ್ಮಾನಿಸಲಾಯಿತು. ಆಕಾಶವಾಣಿ ಕಲಾವಿದ ಜೆ.ನಿರಂಜನ ಅವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜಾತ್ರಾ ಮಹೋತ್ಸವದ ಅಧ್ಯಕ ವಿ.ಜಿ.ಬಣಕಾರ ಸ್ವಾಗತಿಸಿದರು. ಡಿ.ಇಡಿ ಕಾಲೇಜು ಪ್ರಾಚಾರ್ಯ ಬಿ. ಬಸವರಾಜ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.