ಬ್ಯಾಡಗಿ: `ಪೊಲೀಸರು ಎಂತಹ ಒತ್ತಡದ ಪರಿಸ್ಥಿತಿಯಲ್ಲಿಯೂ ಸಂಯಮ ಹಾಗೂ ಸಕಾರಾತ್ಮಕವಾಗಿ ವರ್ತಿಸಬೇಕು' ಎಂದು ಸಿಪಿಐ ಎಂ.ಎಚ್.ಚಿಕ್ಕರೆಡ್ಡಿ ಕಿವಿಮಾತು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಪಿಎಸ್ಐ ನರಸಿಂಹಮೂರ್ತಿ ಬೇಲೂರ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
`ಸಮಸ್ಯೆ ಪರಿಹರಿಸಿಕೊಳ್ಳಲು ಪೊಲೀಸ್ ಠಾಣೆಗೆ ಬರುವ ಜನರೊಂದಿಗೆ ಗೌರವ ಹಾಗೂ ಸೌಜನ್ಯದಿಂದ ನಡೆದುಕೊಂಡಲ್ಲಿ ಪೊಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗುತ್ತಾರೆ. ಇದರಿಂದ ಇಲಾಖೆಗೆ ಒಳ್ಳೆಯ ಹೆಸರು ಬರುವುದಲ್ಲದೆ ಪೊಲೀಸರ ಕುರಿತು ಸಾರ್ವಜನಿಕರಲ್ಲಿನ ಭಯ ಮಾಯವಾಗುತ್ತದೆ' ಎಂದರು.
ಪಿಎಸ್ಐ ಬೇಲೂರ ಮಾತನಾಡಿ, `ಸಿಬ್ಬಂದಿ ಸಹಕಾರದಿಂದ ಅಲ್ಪಾವಧಿಯಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ' ಎಂದರು.
ಅಪರಾಧ ವಿಭಾಗದ ಪಿಎಸ್ಐ ಮಹಾಂತೇಶ ಮಾತನಾಡಿ, `ಪೊಲೀಸರು ಕರ್ತವ್ಯ ಹಾಗೂ ಪ್ರಾಮಾಣಿಕತೆಯಿಂದ ನಡೆದುಕೊಂಡರೆ ಸಾರ್ವಜನಿಕರ ಗೌರವಕ್ಕೆ ಪಾತ್ರರಾಗುತ್ತೇವೆ. ಹೀಗಾಗಿ ಇಲಾಖೆಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು' ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಯಾದ ಎಎಸ್ಐ ಕಡೂರ ಹಾಗೂ ನಿಂಗಪ್ಪ ಮಾತನಾಡಿದರು. ಬಸವರಾಜ ಅಂಜುಟಗಿ ಸ್ವಾಗತಿಸಿದರು. ಅಗಸಿಮನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.