ADVERTISEMENT

ಹಾನಗಲ್: ಬಿಸಿಯೂಟ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 8:40 IST
Last Updated 4 ಅಕ್ಟೋಬರ್ 2012, 8:40 IST

ಹಾನಗಲ್: `ಸರಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಜಾರಿಗೊಳಿಸುತ್ತಿರುವ ಯೋಜನೆಗಳ ಯಶಸ್ಸಿಗೆ ಪಾಲಕರು, ಶಿಕ್ಷಕರು ಮತ್ತು ಜನಪ್ರತಿನಿಧಿಗಳು ಸಹಕಾರ ನೀಡುವ ಅಗತ್ಯತೆಯಿದೆ~ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಹೇಳಿದರು.

ಬುಧವಾರ ಹಾನಗಲ್ಲಿನ ವಿರಾಟನಗರ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಕೇಂದ್ರದ ಉದ್ಘಾಟಿಸಿ ಅವರು ಮಾತನಾಡಿದರು.

`ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ, ಶಿಕ್ಷಕರು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಸರಕಾರದಿಂದ ದೊರಕುವ ಸೌಲಭ್ಯಗಳ ಸದ್ವಿನಿಯೋಗದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ಪ್ರತಿಯೊಬ್ಬರೂ ಬದ್ಧರಾಗಬೇಕು~ ಎಂದು ಸಲಹೆ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಸುಮಾರು 20 ವರ್ಷಗಳಿಂದ ಅನುದಾನ ರಹಿತವಾಗಿ ಸೇವೆ ಸಲ್ಲಿಸಿದ ವಿರಾಟನಗರ ಪ್ರೌಢಶಾಲೆಯ ಶಿಕ್ಷಣ ಪ್ರೇಮ ಶ್ಲಾಘನೀಯ ಎಂದರು. ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್.ಬಳ್ಳಾರಿ ಮಾತನಾಡಿ, ಸರಕಾರದ ಅಕ್ಷರ ದಾಸೋಹ ಮತ್ತು ಸೈಕಲ್ ವಿತರಣೆ ಶಿಕ್ಷಣ ಕ್ಷೇತ್ರದ ಯಶಸ್ಸಿಗೆ ಮುಖ್ಯ ಕಾರಣವಾಗಿದೆ ಎಂದರು.

ಶಾಲೆಯ ಅಧ್ಯಕ್ಷೆ ಜಾನಕಿಬಾಯಿ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಹಸಿನಾಭಿ ನಾಯ್ಕ, ಸದಸ್ಯರಾದ ಗಣೇಶ ಮೂಡ್ಲಿ, ಜಾಫರಸಾಬ ಖೇಣಿ, ತಾಪಂ ಅಧ್ಯಕ್ಷೆ ಲಲಿತವ್ವ ಹಿರೇಮಠ, ಜಿಪಂ ಸದಸ್ಯರಾದ ಬಸವರಾಜ ಹಾದಿಮನಿ, ಕಸ್ತೂರವ್ವ ವಡ್ಡರ, ಬಿಸಿಯೂಟ ಅಧಿಕಾರಿ ರಂಗಸ್ವಾಮಿ, ರತ್ನವ್ವ ಗುಡ್ಡದಮತ್ತಿಹಳ್ಳಿ, ಬಸವರಾಜ ಬಂಡಿವಡ್ಡರ, ಎಚ್.ಎಂ.ವಡ್ಡರ ಉಪಸ್ಥಿತರಿದ್ದರು. ಎಂ.ಎಚ್.ಶಿರಸಿ ಮಾತನಾಡಿದರು. ಆರ್.ಎನ್.ಪಾಟೀಲ ಸ್ವಾಗತಿಸಿದರು. ಗಣೇಶ ವಡ್ಡರ ನಿರೂಪಿಸಿದರು. ಎಂ.ಸಿ.ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.