ADVERTISEMENT

ಹಾವೇರಿ ಜಿಪಂ ಇತರ ಜಿಲ್ಲೆಗಳಿಗೆ ಮಾದರಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 9:00 IST
Last Updated 5 ಅಕ್ಟೋಬರ್ 2012, 9:00 IST
ಹಾವೇರಿ ಜಿಪಂ ಇತರ ಜಿಲ್ಲೆಗಳಿಗೆ ಮಾದರಿ
ಹಾವೇರಿ ಜಿಪಂ ಇತರ ಜಿಲ್ಲೆಗಳಿಗೆ ಮಾದರಿ   

ಹಾವೇರಿ: ಇತ್ತೀಚಿನ ಎಲ್ಲ ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಅವಿ ರೋಧವಾಗಿ ಆಯ್ಕೆ ಮಾಡುವ ಮೂಲಕ ಹಾವೇರಿ ಜಿಲ್ಲಾ ಪಂಚಾಯಿತಿ ರಾಜ್ಯದ ಉಳಿದ ಜಿಲ್ಲೆಗಳಿಗೆ ಮಾದರಿ ಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಹೇಳಿದರು.

ಗುರುವಾರ ಜಿ.ಪಂ. ಸಭಾಭವನದಲ್ಲಿ ಎರಡನೇ ಅವಧಿಗೆ ಜಿ.ಪಂ. ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಂತರ ಅವರು ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದ ಉಳಿದ ಜಿಲ್ಲಾ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಸಣ್ಣ ಪುಟ್ಟ ಗೊಂದಲ, ವಿರೋಧ ವ್ಯಕ್ತವಾಗುವು ದನ್ನು ಕಾಣುತ್ತೇವೆ. ಆದರೆ, ಹಾವೇರಿ ಜಿ.ಪಂ.ನಲ್ಲಿ ಅಂತಹ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೇ ಪರಸ್ಪರ ಸಹಕಾರದ ಮೂಲಕ ಆಯ್ಕೆ ನಡೆಯುತ್ತಿರುವುದು ಸಂತಸದ ವಿಷಯ ಎಂದರು.

ಅಧಿಕಾರದ ಆಕಾಂಕ್ಷಿಗಳು ಹೆಚ್ಚಿದ್ದಾಗ ಅಧಿಕಾರಾವಧಿ ಹಂಚಿಕೆ ಅನಿವಾರ್ಯವಾಗಿದ್ದು, ತಾವು ಕೂಡಾ 10-10 ತಿಂಗಳ ಅಧಿಕಾರ ಹಂಚಿಕೆ ಸೂತ್ರವನ್ನು ಬಳಸಿದ್ದೇವೆ. ಅಧಿಕಾರ ಹಂಚಿಕೆಯಿಂದ ಸಾಧಕ ಬಾಧಕಗಳಿದ್ದು, ಆದರೆ, ಸಹಕಾರ ಇರುವಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಅಧಿಕಾರ ನಡೆಸಲು 10 ತಿಂಗಳ ಅವಧಿ ಕಡಿಮೆ ಆದರೆ, ಇದ್ದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ತೋರಿಸುವುದೇ ನಿಜವಾದ ಸವಾಲು ಎಂದು ಹೇಳಿದರು.

ಅಭಿನಂದನೆ: ಜಿ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಂತರ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ, ಶಾಸಕರು, ವಿಧಾನ ಪರಿಷತ್ ಸದಸ್ಯರು ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ಪುಷ್ಪ ಮಾಲೆ ಅರ್ಪಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಚಿವ ಸಿ.ಎಂ.ಉದಾಸಿ ಮಾತನಾಡಿ, ಜಿಲ್ಲೆಯಲ್ಲಿ ಭೀಕರ ಬರ ಇರುವುದರಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಹೆಚ್ಚಿನ ಕೆಲಸದ ಜವಾಬ್ದಾರಿಯಿದೆ. ಬರ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸುವುದರ ಜತೆಗೆ ಕುಡಿಯುವ ನೀರು, ದನಕರುಗಳಿಗೆ ಮೇಲು ಕೊರತೆಯಾಗದಂತೆ ನೋಡಿಕೊಳ್ಳ ಬೇಕು. ಜಿಲ್ಲಾ ಪಂಚಾಯಿತಿಯ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಮಾತನಾಡಿ, ಜಿಲ್ಲೆಯಲ್ಲಿ ಬರದ ಸಮಸ್ಯೆಗಳ ನಿವಾರಣೆ ಮಾಡು ವುದು ಹೊಸ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸವಾಲಿನ ಕೆಲಸವಾಗಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಸಲಹೆ ಮಾಡಿದರು. ಸಭೆಯಲ್ಲಿ ಶಾಸಕರಾದ ಸುರೇಶ ಗೌಡ ಪಾಟೀಲ, ಜಿ. ಶಿವಣ್ಣ ಸೇರಿದಂತೆ ಜಿ.ಪಂ.ಸದಸ್ಯರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.