ADVERTISEMENT

ದೇವಸ್ಥಾನದ ಆವರಣದಲ್ಲಿ ಮನೆ ನಿರ್ಮಾಣಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 9:56 IST
Last Updated 3 ಜನವರಿ 2018, 9:56 IST

ಅಕ್ಕಿಆಲೂರ: ‘ಆಡೂರು ಗ್ರಾಮದಲ್ಲಿ ಮಾದಿಗ ಸಮುದಾಯದ ಕುಲದೇವತೆ ಮಾತಂಗೇಶ್ವರಿ ದೇವಸ್ಥಾನದ ಆವರಣದಲ್ಲಿ ಫಲಾನುಭವಿಯೊಬ್ಬರಿಗೆ ಆಶ್ರಯ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ಆರೋಪಿಸಿ ಹಲವು ದಲಿತಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಗ್ರಾಮ ಪಂಚಾಯ್ತಿ ಎದುರು ತಮಟೆ ಚಳವಳಿ ನಡೆಸಿದರು.

‘ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳುಗಳಿಂದ ಆಡಳಿತ ಮಂಡಳಿಯ ಗಮನ ಸೆಳೆಯಲಾಗಿದೆ. ಪಿಡಿಒ ಅವರಿಗೂ ದೂರ ಸಲ್ಲಿಸಲಾಗಿದೆ. ಆದರೂ ಕೂಡ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. ‘ಪಿಡಿಒ ಶಾರದಾ ಜಾಲವಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮನೆ ನಿರ್ಮಾಣ ಕೂಡಲೇ ಸ್ಥಗಿತಗೊಳಿಸಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮಾದಿಗ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರೇಮಾ ಹರಿಜನ, ‘ಸಾರ್ವಜನಿಕ ಆಸ್ತಿಯಲ್ಲಿ ಫಲಾನುಭವಿಯೊಬ್ಬರಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಿದ್ದು ಸರಿಯಲ್ಲ. ಈ ಬಗ್ಗೆ ಗಮನ ಸೆಳೆದರೂ ಮೌನಕ್ಕೆ ಶರಣಾಗಿರುವುದು ಸಂದೇಹಗಳಿಗೆ ಎಡೆಮಾಡಿಕೊಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತಾಲ್ಲೂಕು ಪಂಚಾಯ್ತಿ ಇಒ ಡಾ.ಶಶಿಧರ ಎಂ.ಜಿ. ಸ್ಥಳಕ್ಕೆ ಭೇಟಿ ನೀಡಿ, ಜಿಲ್ಲಾ ಪಂಚಾಯ್ತಿ ಸಿಇಒ ಜೊತೆ ಮಾತನಾಡಿ ಅಗತ್ಯ ಕ್ರಮದ ಭರವಸೆ ನೀಡಿದರು. ಆದರೂ, ಪ್ರತಿಭಟನಾನಿರತರು ಮಣಿಯಲಿಲ್ಲ.

ಪ್ರಮುಖರಾದ ರಾಜೂ ಹರಿಜನ, ಪ್ರವೀಣ ಹರಿಜನ, ರೇಖಾ ಹರಿಜನ, ಭೀಮಣ್ಣ ಹರಿಜನ, ಸುರೇಶ ಹರಿಜನ, ಗಿರಿಜವ್ವ ಹರಿಜನ, ಮಲ್ಲಪ್ಪ ಹರಿಜನ, ಮಂಜಪ್ಪ ಹರಿಜನ, ನೀಲಪ್ಪ ಹರಿಜನ, ಅರುಣ ಮಣ್ಣಮ್ಮನವರ ಸೇರಿದಂತೆ ಮಾದಿಗ ಮಹಾಸಭಾ, ದಲಿತ ಸಂಘರ್ಷ ಸಮಿತಿ ಸೇರಿದಂತೆ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.