ಗುತ್ತಲ: ‘ಅನೇಕ ಸಮಾಜ ಸುಧಾರಕರನ್ನು ಕಂಡ ಭಾರತದಲ್ಲಿ ಜಾತಿ, ಭೇದ ಭಾವ ಇಂದಿಗೂ ಜೀವಂತವಾಗಿರುವುದು ವಿಷಾದನೀಯ’ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸಮೀಪದ ಹೊಸರಿತ್ತಿ ಗ್ರಾಮದ ಗುದ್ದಲೀಶಿವಯೋಗೀಶ್ವರ ಸ್ವಾಮೀಜಿ ಜಾತ್ರಾ ಮಹೋತ್ಸವ ಮತ್ತು ಶ್ರೀಗಳ ನಿರಂಜನ ಪಟ್ಟಾಧಿಕಾರ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ‘ನನ್ನ ಕನಸಿನ ಕರ್ನಾಟಕ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬ ಪ್ರಜೆ ಹೆಂಡ, ಹಣಕ್ಕೆ ಮರುಳಾಗದೇ ಮತದಾನ ಮಾಡಿದರೆ, ಉತ್ತಮ ನಾಯಕರ ಆಯ್ಕೆ ಹಾಗೂ ಸಮಾಜ ನಿರ್ಮಾಣ ಸಾಧ್ಯ ಎಂದರು. ಗ್ರಾಮದ ಗುದ್ದಲೀಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ‘ಭಾರತಕ್ಕೆ 16 ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ದೇಶದ ಯುವಕರ ಕನಸು ನನಸಾಗಬೇಕು, ದೇಶದ ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು’ ಎಂದರು.
ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ದುಂಡಸಿ ಕುಮಾರ ಸ್ವಾಮೀಜಿ, ಲಕ್ಕುಂಡಿ ಸಿದ್ಧಲಿಂಗ ಸ್ವಾಮೀಜಿ, ಬಿ.ಜಿ.ಗೌರಿಮನಿ, ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ಧರಾಜ ಕಲಕೋಟಿ ಹಾಗೂ ಕೆ.ಸಿ.ಕೋರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.