ಹಾನಗಲ್: ‘ಗಂಗಾಮತ ಸಮಾಜದ ಭಕ್ತಿ, ಸ್ವಾಭಿಮಾನದ ಸಂಕೇತವಾದ ನಿಜಶರಣ ಅಂಬಿಗರ ಚೌಡಯ್ಯನವರ ಗದ್ದುಗೆ ಅಪವಿತ್ರಗೊಳಿಸಿ ಪೀಠದ ಗುರು ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳ ಮೇಲೆ ದೈಹಿಕ ಹಲ್ಲೆಗೆ ಮುಂದಾದವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಬುಧವಾರ ಪಟ್ಟಣದಲ್ಲಿ ಗಂಗಾಮತ ಸಮಾಜದವರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಇಲ್ಲಿನ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತ ತಲುಪಿತು. ಮಾವನ ಸರಪಳಿಯ ಮೂಲಕ ವೃತದಲ್ಲಿ ಘೋಷಣೆ ಕೂಗಿದ ಗಂಗಾಮತ ಬಾಂಧವರು ಒಂದು ಗಂಟೆ ರಸ್ತೆ ತಡೆ ನಡೆಸಿದರು. ಚೌಡಯ್ಯದಾನಪುರ ಬಳಿಯ ಚಿತ್ರಶೇಖರ ಒಡೆಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಮುಖಂಡ ಅನಂತವಿಕಾಸ ನಿಂಗೋಜಿ ಮಾತನಾಡಿ, ‘ಗಂಗಾಮತ ಸಮಾಜದ ಕುಲದೈವ ನಿಜಶರಣ ಅಂಬಿರಗ ಚೌಡಯ್ಯನವರ ಐಕ್ಯ ಮಂಟಪದ ಮೇಲೆ ಹತ್ತಿ ಕೆಲವು ಕಿಡಗೇಡಿಗಳು ಅಂಬಿಗರ ಸಮಾಜದ ಸ್ವಾಭಿಮಾನವನ್ನು ಕೆಣಕಿದ್ದಾರೆ. ಸಮಾಜದ ಸ್ವಾಮೀಜಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಧರ್ಮದರ್ಶಿ ಕೃಷ್ಣಮೂರ್ತಿ ವಡ್ನಿಕೊಪ್ಪ ಮೇಲೆ ಹಲ್ಲೆ ಮಾಡಿದ ಮೃಗಗಳಂತೆ ವರ್ತನೆ ಮಾಡಿರುವುದು ಖಂಡನೀಯ. ಇದಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು' ಎಂದು ಆಗ್ರಹಿಸಿದರು.
‘ಇದಕ್ಕೆ ಪ್ರಚೋದನೆ ನೀಡಿದ ಅಂಬಿಕಾ ಜಾಲಗಾರ ಮತ್ತವರ ಸಂಗಡಿಗರನ್ನು ಬಂಧಿಸಿ ವಿಚಾರಣೆ ಕೈಗೊಳ್ಳದಿದ್ದರೆ ಆಮರಣಾಂತ ಉಪವಾಸ, ಹೋರಾಟ ನಡೆಸಲಾಗುವುದು’ ಎಂದು ನಿಂಗೋಜಿ ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಶಕುಂತಲಾ ಚೌಗಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ಗಂಗಾಮತ ಸಮಾಜದ ನಗರ ಘಟಕದ ಅಧ್ಯಕ್ಷ ಹನುಮಂತಪ್ಪ ಮಲಗುಂದ, ಮುಖಂಡರಾದ ಶಾಂತಪ್ಪ ಹಳೆಕೋಟಿ, ಸಂತೋಷ ಸುಣಗಾರ, ಚಂದ್ರಪ್ಪ ಜಾಲಗಾರ, ಭಾಸ್ಕರ ಹುಲಮನಿ, ಅಶೋಕ ಆರೆಗೊಪ್ಪ, ಸಿದ್ಧರಾಮಣ್ಣ ಚಿಕ್ಕಣ್ಣನವರ, ಬಲ್ಲಣ್ಣ ಬಂಕಾಪೂರ, ಗುರುರಾಜ ನಿಂಗೋಜಿ, ಮಂಜನಾಥ ಕುಂದೂರ, ನಾಗೇಂದ್ರ ತುಮರಿಕೊಪ್ಪ ಪ್ರತಿಭಟನೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.