ಹಾವೇರಿ: ನಗರದ ಪ್ರಮುಖ ವೃತ್ತಗಳಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆ ಬಳಿ ಹಾಕಲಾಗಿದ್ದ ಜಾಹೀರಾತು ಫಲಕಗಳನ್ನು ನಗರಸಭೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.
ನಗರದ ಹಲವು ಕಡೆಗಳಲ್ಲಿ ಎಲ್ಲೆಂದರಲ್ಲಿ ಜಾಹೀರಾತು ಫಲಕ ಹಾಗೂ ಪೋಸ್ಟರ್ ಅಂಟಿಸುತ್ತಿದ್ದ ಬಗ್ಗೆ ಪ್ರಜಾವಾಣಿಯಲ್ಲಿ ಮೇ 2ರಂದು ‘ಜಾಹೀರಾತು ಅಬ್ಬರ: ಹೋರಾಟಗಾರರಿಗೆ ಅಪಮಾನ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿ ಗಮನಿಸಿದ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಅವರು ಜಾಹೀರಾತು ಫಲಕಗಳನ್ನು ತೆರವುಗಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
ಹೊಸಮನಿ ಸಿದ್ದಪ್ಪ ವೃತ್ತಕ್ಕೆ ತೆರಳಿದಿದ್ದ ನಗರಸಭೆ ಸಿಬ್ಬಂದಿ, ಪ್ರತಿಮೆ ಬಳಿ ನೇತು ಹಾಕಿದ್ದ ಫಲಕಗಳನ್ನು ತೆರವುಗೊಳಿಸಿದರು. ಇದರ ಜೊತೆಯಲ್ಲಿಯೇ ನಗರದ ಹಲವು ಕಡೆಗಳಲ್ಲಿ ಅಳವಡಿಸಿದ್ದ ಜಾಹೀರಾತುಗಳನ್ನು ತೆರವುಗೊಳಿಸಿದ್ದಾರೆ.
‘ಪತ್ರಿಕೆಯಲ್ಲಿ ಬಂದ ವರದಿಯಿಂದ ಎಚ್ಚೆತ್ತು ಜಾಹೀರಾತು ಫಲಕ ತೆರವು ಮಾಡಿರುವ ನಗರಸಭೆಗೆ ಅಭಿನಂದನೆಗಳು. ಮುಂಬರುವ ದಿನಗಳಲ್ಲಿಯೂ ಪ್ರತಿಮೆ ಬಳಿ ಯಾವುದೇ ಜಾಹೀರಾತು ಹಾಕದಂತೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಜನರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.