ಹಾವೇರಿ: ಮನೆ ಬಿಟ್ಟು ಬಂದು ನಗರದಲ್ಲಿ ಭಿಕ್ಷೆ ಬೇಡುತ್ತಿದ್ದ 13 ವರ್ಷದ ಬಾಲಕನನ್ನು ಪೊಲೀಸರು ಹಾಗೂ ಚೈತನ್ಯ ಮಕ್ಕಳ ಸಹಾಯವಾಣಿ ಸದಸ್ಯರು ರಕ್ಷಿಸಿದ್ದಾರೆ.
ಸೋಮವಾರ ನಗರದಲ್ಲಿ ಸಿಗ್ನಲ್ನಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕನನ್ನು ಕಂಡ ಪೊಲೀಸರು, ಕೂಡಲೇ ಮಕ್ಕಳ ಸಹಾಯವಾಣಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಸದಸ್ಯರು ಆ ಬಾಲಕನನ್ನು ಕಚೇರಿಗೆ ಕರೆದೊಯ್ದು, ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿದರು.
‘ಆಪ್ತ ಸಮಾಲೋಚನೆ ಮಾಡಿದಾಗ ಬಾಲಕ ಆರಂಭದಲ್ಲಿ ಏನನ್ನೂ ಹೇಳಲಿಲ್ಲ. ಸೂಕ್ಷ್ಮವಾಗಿ ಮಾತನಾಡಿಸಿ ಮನಪರಿವರ್ತನೆ ಮಾಡಿಸಿದಾಗ, ‘ನಾನು ನ್ಯಾಮತಿಯವನು. ಮಾನಸಿಕವಾಗಿ ನೊಂದಿದ್ದು, ಪೋಷಕರನ್ನು ತೊರೆದು ಇಲ್ಲಿಗೆ ಬಂದಿದ್ದೆ’ ಎಂದು ಹೇಳಿಕೆ ಕೊಟ್ಟ. ಸದ್ಯ ಆತನಿಗೆ ಶ್ರೀ ಶಕ್ತಿ ಮಕ್ಕಳ ಆಶ್ರಮದಲ್ಲಿ ಉಳಿಸಿಕೊಂಡಿದ್ದೇವೆ’ ಎಂದು ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್ ಹೇಳಿದರು.
‘ಮಗುವಿನ ಪಾಲಕರ ಪತ್ತೆಗೆ ನ್ಯಾಮತಿ ಪೊಲೀಸ್ ಠಾಣೆ ಹಾಗೂ ದಾವಣಗೆರೆ ಮಕ್ಕಳ ಸಹಾಯವಾಣಿ ತಂಡಕ್ಕೆ ಮಾಹಿತಿ ರವಾನಿಸಿದ್ದೇವೆ’ ಎಂದೂ ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.