ADVERTISEMENT

ವಿದ್ಯುತ್‌ ದರ ಏರಿಕೆಗೆ ಖಂಡನೆ

ನಿರಂತರ ವಿದ್ಯುತ್‌ ಪೂರೈಸಲು ಡಿವೈಎಫ್‌ಐ ಮತ್ತು ಎಸ್ಎಫ್‌ಐ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 14:03 IST
Last Updated 11 ಏಪ್ರಿಲ್ 2022, 14:03 IST
ವಿದ್ಯುತ್ ದರವನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿ ಡಿವೈಎಫ್‍ಐ ಹಾಗೂ ಎಸ್‍ಎಫ್‍ಐ ಕಾರ್ಯಕರ್ತರು ಸೋಮವಾರ ಹಾವೇರಿಯ ಹೆಸ್ಕಾಂ ಅಧಿಕಾರಿ ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು 
ವಿದ್ಯುತ್ ದರವನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿ ಡಿವೈಎಫ್‍ಐ ಹಾಗೂ ಎಸ್‍ಎಫ್‍ಐ ಕಾರ್ಯಕರ್ತರು ಸೋಮವಾರ ಹಾವೇರಿಯ ಹೆಸ್ಕಾಂ ಅಧಿಕಾರಿ ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು    

ಹಾವೇರಿ: ವಿದ್ಯುತ್ ದರವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ಕ್ರಮವನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಕಾರ್ಯಕರ್ತರು ಹಾವೇರಿ ಹೆಸ್ಕಾಂ ಕಚೇರಿ ಎದುರುಸೋಮವಾರ ಪ್ರತಿಭಟನೆ ನಡೆಸಿ, ಹೆಸ್ಕಾಂ ಅಧಿಕಾರಿ ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು.

ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ‘ರಾಜ್ಯ ಸರ್ಕಾರವು ಪ್ರತಿ ಯುನಿಟ್ ವಿದ್ಯುತ್ ದರವನ್ನು 10 ಪೈಸೆಯಿಂದ 20 ಪೈಸೆಗೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ಅನ್ನು 15 ಪೈಸೆಯಿಂದ 25 ಪೈಸೆಗೆ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಮತ್ತೊಂದು ಹೊರೆಯನ್ನು ಹೇರಲು ಮುಂದಾದ ವಿದ್ಯುತ್ ಕಂಪನಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

2009ರಿಂದ 2022ರ ಇಂದಿನವರೆಗೆ ಪ್ರತಿ ಯುನಿಟ್ ವಿದ್ಯುತ್ ಬೆಲೆಯನ್ನು ₹2.70 ಗಳಷ್ಟು ಹೆಚ್ಚಿಸಲಾಗಿದೆ. ಇದು ಜನತೆಯ ತೆರಿಗೆಯ ಬರೆಯನ್ನು ಎಳೆದಿದ್ದು, ಈ ಕೂಡಲೇ ಬೆಲೆ ಏರಿಕೆಯ ಕ್ರಮಗಳನ್ನು ವಾಪಾಸ್‌ ಪಡೆಯುವಂತೆ ಬಲವಾಗಿ ಒತ್ತಾಯಿಸಿದರು.

ADVERTISEMENT

ಡಿವೈಎಫ್‍ಐ ಜಿಲ್ಲಾ ಸಂಚಾಲಕ ನಾರಾಯಣ ಕಾಳೆ,ವಿದ್ಯುತ್ ಸರಬರಾಜು ಕಂಪನಿಗಳು ತಮ್ಮ ಸರಬರಾಜುಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಇಚ್ಛಾಶಕ್ತಿಯ ಕೊರತೆ ಇದ್ದು ಇಲ್ಲ ಸಲ್ಲದ ನೆಪಗಳನ್ನು ಮುಂದು ಮಾಡಿ ನಷ್ಟವನ್ನು ಭರಿಸಲು ಬಳಕೆದಾರರನ್ನು ಉಸಿರುಗಟ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‍ಎಫ್‍ಐ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ನರೇಗಲ್ ಮಾತನಾಡಿ, ಈಗಾಗಲೇ ಪಿಯುಸಿ, ಪದವಿ ಹಾಗೂ ಇತರೆ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭಗೊಳ್ಳಲಿವೆ. ಈ ಸಂದರ್ಭದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಯಾವುದೇ ಅಡಚಣೆಯುಂಟಾಗದಂತೆ ನಿರಂತರ ವಿದ್ಯುತ್ ಸೌಲಭ್ಯ ಒದಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ವಿದ್ಯುತ್ ದರ ಹೆಚ್ಚಳ ಮಾಡಿದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುಖಂಡರಾದ ರೇಣುಕಾ ಕಹಾರ, ರೋಷನ್ ಮಲ್ಲಾಡ, ರಾಜು ಮಲ್ಲೂರು, ಅಣ್ಣಾಸಿಂಗ್ ಕಹಾರ, ಗಿರೀಶ ಭಗವಾನಪುರ, ಈಶ್ವರಿ ಕಹಾರ, ಸ್ವಾತಿ ಪಿ.ಕೆ, ವಿಶಾಲಾ ಮುಳಗುಂದ, ಭಗತ್ ಸಿಂಗ್ ಕಾಪೆರ್ಂಟರ್, ಮೇಘನಾ, ಅಭಿಷೇಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.