ಹಾವೇರಿ: ನಕಲಿ ಮತದಾರರ ಗುರುತಿನ ಚೀಟಿ ತಯಾರಿಸುತ್ತಿದ್ದ ನಗರದ ಎಂ.ಜಿ.ರಸ್ತೆಯ ‘ಹಾವೇರಿ ಒನ್ ಡಿಜಿಟಲ್ ಸೇವಾ ಕೇಂದ್ರ’ದ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ನೇತೃತ್ವದ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದೆ.
ಸೇವಾ ಕೇಂದ್ರದ ಜೀವನ್ ರಜಪೂತ ಮತ್ತು ನವೀನ ಉಪ್ಪಾರ ಎಂಬುವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ನಕಲಿ ಗುರುತಿನ ಚೀಟಿ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
‘ಮತದಾರರ ಗುರುತಿನ ಚೀಟಿ ಮೇಲಿನ ನನ್ನ ಸಹಿ ನಕಲಿ ಎಂದು ಹಾವೇರಿ ಉಪವಿಭಾಗಾಧಿಕಾರಿ ಕರೆ ಮಾಡಿ ತಿಳಿಸಿದ ಮೇರೆಗೆ, ತಂಡ ರಚಿಸಿ ‘ಕ್ಷಿಪ್ರ ಕಾರ್ಯಾಚರಣೆ’ ಮಾಡಿದೆವು. ಮೊದಲಿಗೆ ಮಫ್ತಿಯಲ್ಲಿ ಇಬ್ಬರು ಪೊಲೀಸರನ್ನು ಸೇವಾ ಕೇಂದ್ರದ ಬಳಿ ಕಳುಹಿಸಿ, ಮಾಹಿತಿ ಕಲೆ ಹಾಕಿದ ನಂತರ ದಾಳಿ ನಡೆಸಿದೆವು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ತಿಳಿಸಿದರು.
‘ಚುನಾವಣಾ ಆಯೋಗದಿಂದ ದೊರೆಯುವ ಮಾಹಿತಿ ಮತ್ತು ಭಾವಚಿತ್ರ ಆಧರಿಸಿ, ಕಾರ್ಡ್ಗಳನ್ನು ಮುದ್ರಿಸಿ ಕೊಡಲು ಈ ಸೇವಾ ಕೇಂದ್ರಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಸೇವಾ ಕೇಂದ್ರದಲ್ಲೇ ಫೋಟೊಗಳನ್ನು ತೆಗೆದು,ಹರಿಯಾಣ ಮೂಲದ printportal.xyz ಸಾಫ್ಟ್ವೇರ್ ಮೂಲಕ ಮುಂಬರುವ ಚುನಾವಣೆಗಾಗಿ ನಕಲಿ ಕಾರ್ಡ್ ಸೃಷ್ಟಿಸುತ್ತಿದ್ದರು. ಎಷ್ಟು ಕಾರ್ಡ್ಗಳನ್ನು ಇದುವರೆಗೆ ಸೃಷ್ಟಿಸಲಾಗಿದೆ, ಯಾವ ಯಾವ ರಾಜ್ಯಗಳಲ್ಲಿ ಇವರ ಜಾಲ ಹರಡಿದೆ ಎಂಬುದು ದೊಡ್ಡ ಮಟ್ಟದ ತನಿಖೆಯಿಂದ ಗೊತ್ತಾಗಬೇಕಿದೆ’ ಎಂದುಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.