ಹಾವೇರಿ: ‘ತಾನು ಬೆಳೆದ ಬೆಳೆಯನ್ನು ಮೊಬೈಲ್ ಆ್ಯಪ್ ಮೂಲಕ ರೈತನೇ ಸಮೀಕ್ಷೆ ಮಾಡುವ ಸುವರ್ಣಾವಕಾಶವನ್ನು ಈ ಬಾರಿ ಕಲ್ಪಿಸಿದ್ದೇವೆ. ರಾಜ್ಯದ ಅನ್ನದಾತರಿಗೆ ಪ್ರಥಮ ಬಾರಿಗೆ ಇಂಥದ್ದೊಂದು ಸ್ವತಂತ್ರ ಸಿಕ್ಕಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ತಾಲ್ಲೂಕಿನ ಅಗಡಿ ಗ್ರಾಮದ ನಾಗಪ್ಪ ಬಸೇಗಣ್ಣಿ ಅವರ ಸೋಯಾಬಿನ್ ಹೊಲದಲ್ಲಿ ಮೊಬೈಲ್ ಆ್ಯಪ್ ಮೂಲಕ ‘ಬೆಳೆ ಸಮೀಕ್ಷಾ ಕಾರ್ಯ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೂರು ವರ್ಷಗಳಿಂದ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಸಂಪೂರ್ಣವಾದ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಕಾರಣ ಒಂದು ಸರ್ವೆ ನಂಬರ್ನಲ್ಲಿ ನಾಲ್ಕೈದು ಹಿಸ್ಸಾಗಳಿದ್ದರೆ, ಸಮಸ್ಯೆಯಾಗುತ್ತಿತ್ತು. ಏಕೆಂದರೆ ನಮ್ಮಲ್ಲಿ ಇನ್ನೂ ಹಿಸ್ಸಾಗಳು ಪೋಡಿಯಾಗಿಲ್ಲ. 2.10 ಕೋಟಿ ಪ್ಲಾಟ್ಗಳಲ್ಲಿ 1.5 ಕೋಟಿ ಮಾತ್ರ ಇದುವರೆಗೆ ಪೋಡಿಯಾಗಿದೆ ಎಂದು ಹೇಳಿದರು.
ಆ.24ರೊಳಗೆ ಪೂರ್ಣ:ರೈತನೇ ತನ್ನ ಬೆಳೆಯನ್ನು ಸಮೀಕ್ಷೆ ಮಾಡುವ ವಿಧಾನವನ್ನು ಈ ವರ್ಷದಿಂದ ಜಾರಿಗೆ ತರಲಾಗಿದೆ. ‘ನನ್ನ ಬೆಳೆ ನನ್ನ ಹಕ್ಕು’ ಘೋಷವಾಕ್ಯದಡಿ ತನಗೆ ತಾನೇ ಪ್ರಮಾಣಪತ್ರ ಕೊಟ್ಟಿಕೊಳ್ಳುವಂಥ ವ್ಯವಸ್ಥೆ. ರೈತರಿಗೆ ಆ್ಯಂಡ್ರಾಯ್ಡ್ ಫೋನ್ ಇಲ್ಲದಿದ್ದ ಪಕ್ಷದಲ್ಲಿ ಪಿ.ಆರ್.ಗಳು ನೆರವು ನೀಡುತ್ತಾರೆ. ರಾಜ್ಯದಲ್ಲಿ ಆ.24ರೊಳಗೆ ಬೆಳೆ ಸಮೀಕ್ಷಾ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ಬೆಳೆ ವಿಮೆ ಬಂದಾಗ, ಒಂದು ಸರ್ವೆ ನಂಬರ್ನಲ್ಲಿ ಒಂದು ಕಡೆ ಫೋಟೊ ತೆಗೆದರೆ 30 ಮೀಟರ್ ಮಾತ್ರ ಕ್ಯಾಪ್ಚರ್ ಆಗುತ್ತಿತ್ತು. ಬೆಳೆ ವ್ಯತ್ಯಾಸ ಬಂದಿದೆ ಎಂದು ಸಮಸ್ಯೆ ಉಂಟಾಗುತ್ತಿತ್ತು. ಈ ಸಮಸ್ಯೆ ಬಗೆಹರಿಯಲಿದೆ. ಉತ್ಸವದಂದತೆ ಈ ಕಾರ್ಯಕ್ರಮ ಆಚರಿಸುತ್ತಿದ್ದೇವೆ. ಕೊಪ್ಪಳ, ಗದಗ, ಹಾವೇರಿಯಲ್ಲಿ ಈ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ ಎಂದರು.
ಪರವಾನಗಿ ರದ್ದು:ಕಾಳಸಂತೆಯಲ್ಲಿ ಯೂರಿಯಾ ಗೊಬ್ಬರ ಮಾರಾಟ ಮಾಡಿದರೆ, ಗೋದಾಮುಗಳ ಮೇಲೆ ದಾಳಿ ಮಾಡಲು ಮತ್ತು ಪರವಾನಗಿ ರದ್ದು ಮಾಡಲುಜಂಟಿ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಅಕ್ರಮವಾಗಿ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.