ಹಾವೇರಿ: ‘ಸನ್ಮಾರ್ಗ ತೋರಿಸುವ ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಅವರು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಜಿಲ್ಲಾ ನೇಕಾರ ಒಕ್ಕೂಟ ಹಾಗೂ ಹಾವೇರಿ ತಾಲ್ಲೂಕು ದೇವಾಂಗ ಸಂಘದ ಸಹಯೋಗದಲ್ಲಿ ಈಚೆಗೆ ಶಿವಲಿಂಗ ನಗರದಲ್ಲಿರುವ ಬನಶಂಕರಿ ದೇವಿ ದೇವಸ್ಥಾನದ ಸಮುದಾಯದ ಭವನದಲ್ಲಿ ಆಯೋಜಿಸಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜೀವನದ ಪ್ರತಿ ಹಂತವನ್ನೂ ಶರಣರು ವಚನ ಸಾಹಿತ್ಯದಲ್ಲಿ ಸವಿಸ್ತಾರವಾಗಿ ಹಾಗೂ ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ಸಾರ್ಥಕ ಬದುಕಿನ ಸಾರವೆಲ್ಲವೂ ವಚನಸಾಹಿತ್ಯದಲ್ಲಿ ಅಡಗಿದೆ. ಅದನ್ನು ನಾವೆಲ್ಲರೂ ಪಾಲಿಸಬೇಕು' ಎಂದರು.
ನಗರದ ಬನಶಂಕರಿ ದೇವಿ ದೇವಸ್ಥಾನದ ಸಮುದಾಯದ ಭವನದ ಅಭಿವೃದ್ಧಿಗೆ ₹5 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ವಚನಕಾರರು ಸಮಾನತೆಯನ್ನು ಪ್ರತಿಪಾದಿಸಿ, ಮೌಢ್ಯವನ್ನು ವಿರೋಧಿಸಿ ಸಮಾಜದಲ್ಲಿ ವಿಚಾರ ಕ್ರಾಂತಿಯನ್ನು ಆರಂಭಿಸಿದರು. ದೇವರ ದಾಸಿಮಯ್ಯ ಅವರ ಅದರ್ಶ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅದರ್ಶವಾಗಿಟ್ಟುಕೊಳ್ಳಬೇಕು ಎಂದರು.
ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಮಾಲತೇಶ ಅಂಗೂರ ಉಪನ್ಯಾಸ ನೀಡಿದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಡಾ.ಬಸವರಾಜ ಕೇಲಗಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ, ನೇಕಾರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಶಂಕ್ರಣ್ಣ ನ್ಯಾಮತಿ, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಸಂಕಪ್ಪ ಮಾರನಾಳ, ಹಾವೇರಿ ತಾಲ್ಲೂಕು ದೇವಾಂಗ ಸಂಘದ ಅಧ್ಯಕ್ಷ ಮಹೇಶ ಕುದರಿ, ನಗರ ದೇವಾಂಗ ಸಂಘದ ಅಧ್ಯಕ್ಷ ಸೋಮಣ್ಣ ಕುದರಿ, ನಗರ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಕುದರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.