ADVERTISEMENT

ಹೊಸನೀರಲಗಿ: ಡಿ.ಸಿ ಗ್ರಾಮ ವಾಸ್ತವ್ಯ

‘ಹಳ್ಳಿಕಡೆಗೆ ಜಿಲ್ಲಾಧಿಕಾರಿಗಳ ನಡಿಗೆ’: ಫೆ.20ರಂದು ತಹಶೀಲ್ದಾರ್‌ಗಳ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 14:59 IST
Last Updated 16 ಫೆಬ್ರುವರಿ 2021, 14:59 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ಹಳ್ಳಿಗಳ ಸಾರ್ವಜನಿಕರ ಅಹವಾಲು ಹಾಗೂ ಬೇಡಿಕೆಗಳ ಕುರಿತಂತೆ ಸ್ಥಳದಲ್ಲಿಯೇ ಕೈಗೊಳ್ಳಬಹುದಾದ ಪರಿಹಾರದ ನಿಟ್ಟಿನಲ್ಲಿ ಫೆ.20ರ ಮೂರನೇ ಶನಿವಾರ ಕಂದಾಯ ಅಧಿಕಾರಿಗಳು ಹಾಗೂ ಇತರ ಇಲಾಖಾ ಅಧಿಕಾರಿಗಳು ಗ್ರಾಮ ವಾಸ್ತವ್ಯ ಆರಂಭಗೊಳ್ಳಲಿದ್ದು, ಸವಣೂರ ತಾಲ್ಲೂಕಿನ ಹೊಸನೀರಲಗಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ವಾಸ್ತವ್ಯ ಮಾಡಲಿದ್ದಾರೆ.

ಕಂದಾಯ ಸಚಿವರ ನಿರ್ದೇಶನದಂತೆ ‘ಹಳ್ಳಿಕಡೆಗೆ ಜಿಲ್ಲಾಧಿಕಾರಿಗಳ ನಡಿಗೆ’ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಕುರಿತಂತೆ ಜಿಲ್ಲಾಧಿಕಾರಿ ಸೂಚನೆ ಹೊರಡಿಸಿದ್ದು, ಹೊಸನೀರಲಗಿ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಆವರಣದಲ್ಲಿ ಜಿಲ್ಲಾಧಿಕಾರಿ ಅಧಿಕಾರಿಗಳ ತಂಡದೊಂದಿಗೆ ಗ್ರಾಮ ವಾಸ್ತವ್ಯ ಕೈಗೊಂಡು ಸಾರ್ವಜನಿಕರ ಅಹವಾಲುಗಳು, ಬೇಡಿಕೆಗಳನ್ನು ಸ್ವೀಕರಿಸಲಿದ್ದಾರೆ.

ಫೆ.20ರಂದು ಶನಿವಾರ ಆಯಾ ತಾಲ್ಲೂಕು ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದು, ಹಾವೇರಿ ತಾಲ್ಲೂಕಿನ ಕೋಳೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ, ಹಿರೇಕೆರೂರು ತಾಲ್ಲೂಕು ಕೋಡ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ, ರಾಣೆಬೆನ್ನೂರ ತಾಲ್ಲೂಕು ನೂಕಾಪೂರ ಗ್ರಾಮದ ಸರ್ಕಾರಿ ಪ್ರಾಥಮ ಶಾಲೆ ಆವರಣದಲ್ಲಿ ಗ್ರಾಮ ವಾಸ್ತವ್ಯ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ADVERTISEMENT

ಬ್ಯಾಡಗಿ ತಾಲ್ಲೂಕು ಬಿಸಲಹಳ್ಳಿ ಗ್ರಾಮದ ಗ್ರಾ.ಪಂ. ಕಾರ್ಯಾಲಯ, ರಟ್ಟೀಹಳ್ಳಿ ತಾಲ್ಲೂಕು ಲಿಂಗದೇವರಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಆವರಣ, ಶಿಗ್ಗಾವಿ ತಾಲ್ಲೂಕು ಮಮದಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣ, ಹಾಗೂ ಹಾನಗಲ್ ತಾಲ್ಲೂಕು ಮಕರವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಸ್ಥಳ ನಿಗದಿ ಮಾಡಿದ್ದು, ತಾಲ್ಲೂಕು ಅಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ತೆರಳಿ ಗ್ರಾಮದ ಸಾರ್ವಜನಿಕರಿಂದ ಅಹವಾಲು ಹಾಗೂ ಬೇಡಿಕೆ ಸ್ವೀಕರಿಸಿ ಸೂಕ್ತ ಪರಿಹಾರಕ್ಕೆ ಕ್ರಮವಹಿಸಲು ಆಯಾ ತಾಲ್ಲೂಕಿನ ಎಲ್ಲ ತಹಶೀಲ್ದಾರಗಳಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.