ಹಾವೇರಿ: ಜನವರಿ 6 ರಿಂದ 8ರವರೆಗೆ ಹಾವೇರಿಯಲ್ಲಿ ಜರುಗಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವ್ಯಾಪಕ ಮಾಧ್ಯಮ ಪ್ರಚಾರಕ್ಕಾಗಿ ಹೈಟೆಕ್ ಮಾಧ್ಯಮ ಕೇಂದ್ರ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಧ್ಯಮ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುದ್ದಿ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳು ವೇಗವಾಗಿ ಸುದ್ದಿ, ವಿಡಿಯೊ ಹಾಗೂ ಫೋಟೋಗಳನ್ನು ರವಾನಿಸಲು ಅನುಕೂಲವಾಗುವಂತೆ ಒಂದೇ ಸೂರಿನಡಿ 100 ಕಂಪ್ಯೂಟರ್ ಅಳವಡಿಕೆ, ಇಂಟರ್ನೆಟ್ ಸೌಲಭ್ಯ, ಮುಖ್ಯ ವೇದಿಕೆಯಿಂದ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ, ಮಾಧ್ಯಮ ಕೊಠಡಿಯೊಳಗೆ ಸಂವಾದ ಹಾಲ್, ಒಳಗೊಂಡಂತೆ ಸುಸಜ್ಜಿತವಾಗಿ ಮಾಧ್ಯಮ ಕೇಂದ್ರ ನಿರ್ಮಾಣ ಮಾಡಲು ನಿರ್ಧರಿಸಲಾಯಿತು.
ಸಮ್ಮೇಳನದ ವರದಿಗಾರಿಕೆಗೆ ಆಗಮಿಸುವ ರಾಜ್ಯ ಮಟ್ಟದ ದಿನಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳಿಗೆ ವಾಸ್ತವ್ಯಕ್ಕೆ ವಸತಿ ವ್ಯವಸ್ಥೆ, ಊಟ, ಉಪಾಹಾರ ವ್ಯವಸ್ಥೆ, ಪಾಸ್ ವ್ಯವಸ್ಥೆ, ವಾಹನ, ಕಾರ್ಯಕ್ರಮದ ನೇರ ಪ್ರಸಾರಕ್ಕೆ ಒಬಿ ವಾಹನ ನಿಲುಗಡೆ ಸೇರಿದಂತೆ ಯಾವುದೇ ಅನಾನುಕೂಲವಾಗದಂತೆ ಕ್ರಮವಹಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಮ್ಮೇಳನದ ವಿಶೇಷ ಕರ್ತವ್ಯಾಧಿಕಾರಿ ಬಸವರಾಜ ಹೂಗಾರ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಎನ್.ಐ.ಸಿ. ಅಧಿಕಾರಿ ಹೆಗಡೆ, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.