ADVERTISEMENT

ಸ್ವಚ್ಛತಾ ಕಾರ್ಯಕ್ಕೆ ಯಂತ್ರಗಳ ಲೋಕಾರ್ಪಣೆ

ಸಾವಿರ ನಗರವಾಸಿಗಳಿಗೆ ಶೀಘ್ರದಲ್ಲೇ ಮನೆ ನಿರ್ಮಾಣಕ್ಕೆ ಹಕ್ಕುಪತ್ರ: ಶಾಸಕ ನೆಹರು ಓಲೇಕಾರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 14:52 IST
Last Updated 25 ಜುಲೈ 2022, 14:52 IST
ಹಾವೇರಿ ನಗರಸಭೆ ಆವರಣದಲ್ಲಿ ಸೋಮವಾರ ಘನತ್ಯಾಜ್ಯ ವಿಲೇವಾರಿಯ ಹೊಸ ವಾಹನಗಳ ಉದ್ಘಾಟನೆಯನ್ನು ಶಾಸಕ ನೆಹರು ಓಲೇಕಾರ ನೆರೆವೇರಿಸಿದರು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಉಪಾಧ್ಯಕ್ಷೆ ಜಾಹೀರಾಬಾನು ಜಮಾದಾರ ಇದ್ದಾರೆ
ಹಾವೇರಿ ನಗರಸಭೆ ಆವರಣದಲ್ಲಿ ಸೋಮವಾರ ಘನತ್ಯಾಜ್ಯ ವಿಲೇವಾರಿಯ ಹೊಸ ವಾಹನಗಳ ಉದ್ಘಾಟನೆಯನ್ನು ಶಾಸಕ ನೆಹರು ಓಲೇಕಾರ ನೆರೆವೇರಿಸಿದರು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಉಪಾಧ್ಯಕ್ಷೆ ಜಾಹೀರಾಬಾನು ಜಮಾದಾರ ಇದ್ದಾರೆ   

ಹಾವೇರಿ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಬಡವರ ಹಾಗೂ ಹಿಂದುಳಿದವರ ಏಳಿಗೆಗಾಗಿ ಶ್ರಮಿಸುತ್ತಿದೆ. ಒಂದು ಸಾವಿರ ನಗರವಾಸಿಗಳಿಗೆ ಶೀಘ್ರದಲ್ಲೇ ಮನೆ ನಿರ್ಮಾಣಕ್ಕೆ ಹಕ್ಕುಪತ್ರ ಪತ್ರ ನೀಡಲಾಗುವುದು’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಹಾವೇರಿ ನಗರಸಭೆ ಆವರಣದಲ್ಲಿ ಸೋಮವಾರ ಆಶ್ರಯ ಮನೆ ಮಂಜೂರಾತಿ ಆದೇಶ ಪತ್ರ ವಿತರಣೆ ಹಾಗೂ ಘನತ್ಯಾಜ್ಯ ವಿಲೇವಾರಿಗೆ ಹೊಸ ವಾಹನಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಮಂಜೂರಾದ 18 ಸಾವಿರ ಮನೆಗಳಲ್ಲಿ 2,500 ಮನೆಗಳನ್ನು ನಿರ್ಮಾಣ ಮಾಡಿಲ್ಲ. ಆಯಾ ಆರ್ಥಿಕ ವರ್ಷದ ಅನುದಾನ ಆಯಾ ಆರ್ಥಿಕ ವರ್ಷದಲ್ಲೇ ವೆಚ್ಚ ಮಾಡಬೇಕು ಎಂದು ಸಲಹೆ ನೀಡಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹3.50 ಲಕ್ಷ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ ₹2.70 ಲಕ್ಷ ಸಹಾಯಧನ ನೀಡಲಾಗುವುದು. ಫಲಾನುಭವಿಗಳು ವಿಳಂಬ ಮಾಡದೇ ಮನೆ ನಿರ್ಮಾಣಕ್ಕೆ ಮುಂದಾಗಬೇಕು. ಈ ಆರ್ಥಿಕ ವರ್ಷದಲ್ಲೇ ಮನೆಗಳ ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳಬೇಕು. ಇಂದು ಸಾಂಕೇತಿಕವಾಗಿ 100 ಜನರಿಗೆ ಹಕ್ಕು ಪತ್ರ ನೀಡಲಾಗಿದೆ. ಬರುವ ದಿನಗಳಲ್ಲಿ 1136 ಜನರಿಗೆ ಹಕ್ಕುಪತ್ರ ನೀಡಲಾಗುವುದು ಎಂದರು.

ADVERTISEMENT

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀಲರಗಿ ಮಾತನಾಡಿ, ನಗರ ಕಸ ವಿಲೇವಾರಿಗಾಗಿ 3 ಟ್ರ್ಯಾಕ್ಟರ್, 3 ಆಟೊ ಟಿಪ್ಪರ್ ಹಾಗೂ ಒಂದು ಕಸ ವಿಂಗಡನೆ ಮಿಷನ್‍ಗೆ ಚಾಲನೆ ನೀಡಲಾಗಿದೆ. ಅಮೃತ ನಿರ್ಮಲ ನಗರ ಯೋಜನೆಯಡಿ ₹1 ಕೋಟಿ ಅನುದಾನ ಮಂಜೂರಾಗಿದೆ. ಬರುವ ದಿನಗಳಲ್ಲಿ ₹2 ಕೋಟಿ ಅನುದಾನದಲ್ಲಿ ನೂತನ ವಾಹನ ಹಾಗೂ ಸ್ವಚ್ಛತಾ ಯಂತ್ರಗಳು ಬರಲಿವೆ ಹಾಗೂ ನಗರದಲ್ಲಿ 600 ಸಸಿಗಳನ್ನು ನೆಡಲಾಗುವುದು ಎಂದರು.

ನಗರಸಭೆ ಉಪಾಧ್ಯಕ್ಷೆ ಜಾಹೀರಾಬಾನು ಜಮಾದಾರ, ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ ಶಿವಶಂಕರ ಡಂಬಳ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಹಾಗೂ ನಗರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.