ಹಾವೇರಿ: ‘ವಾಹನಗಳ ಪ್ರದೂಷಣೆಯಿಂದ ವಾಯುಮಾಲಿನ್ಯ ಉಂಟಾಗುತ್ತಿದ್ದು, ವಾಯುಮಾಲಿನ್ಯದಿಂದ ಅಲರ್ಜಿ, ಶ್ವಾಸಕೋಶದ ತೊಂದರೆಗಳು, ಸೋರಿಯಾಸಿಸ್ ಮುಂತಾದ ರೋಗ ಲಕ್ಷಣಗಳು ಹೆಚ್ಚಾಗುತ್ತಿವೆ’ ಎಂದು ಸಿಂದಗಿ ಶಾಂತವೀರೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯದ ವೈದ್ಯ ಡಾ.ಸಂಗಮೇಶ್ ದೊಡ್ಡಗೌಡರ ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಯು ಮಾಲಿನ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚು ಆಮ್ಲಜನಕ ಉತ್ಪತ್ತಿ ಮಾಡುವ ತುಳಸಿ, ಶುಂಠಿ, ಅರಿಸಿನದ ಗಿಡಗಳನ್ನು ಬೆಳೆಸುವುದರ ಮೂಲಕ ವಾಯು ಮಾಲಿನ್ಯ ತಡೆಗಟ್ಟಬಹುದು. ದೆಹಲಿಯಲ್ಲಿ ಆಮ್ಲಜನಕವನ್ನು ಖರೀದಿಸಿ ಸೇವಿಸುವ ವಾತಾವರಣ ನಿರ್ಮಾಣವಾಗಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ ಮಾತನಾಡಿ, ವಾಯುಮಾಲಿನ್ಯದಿಂದ ಉಸಿರಾಟದ ತೊಂದರೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಸಾರ್ವಜನಿಕರು ವಾಹನಗಳಿಗೆ ಕಲಬೆರಕೆ ಇಂಧನ ಬಳಸಬಾರದು. ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸುವುದರ ಮೂಲಕ ವಾಯುಮಾಲಿನ್ಯ ತಡೆಯಬಹುದು ಎಂದು ಹೇಳಿದರು.
ಮೋಟಾರು ವಾಹನ ನಿರೀಕ್ಷಕ ಬಸವಣ್ಣೆಪ್ಪ ಡಿ.ಹರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲಕಾಲಕ್ಕೆ ವಾಹನಗಳ ವಾಯು ಮಾಲಿನ್ಯವನ್ನು ತಪಾಸಣೆ ಮಾಡಿಸಿಕೊಂಡು ಪ್ರಮಾಣಪತ್ರಗಳನ್ನು ನಿಯಮಿತವಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯ ರೇವಣಸಿದ್ದಯ್ಯ, ಮೋಟಾರು ವಾಹನ ನಿರೀಕ್ಷಕ ಪ್ರಭುಸ್ವಾಮಿ ಹಿರೇಮಠ, ಅಧೀಕ್ಷಕ ರಮೇಶ ದೊಡ್ಡಮನಿ, ಸಿಬ್ಬಂದಿ ಸತೀಶ ವೈ.ಆರ್., ಮೆಹಬೂಬ ಹೋಟೆಗಾಳಿ, ಶ್ರೀಪಾದ ಬ್ಯಾಳಿ ಹಾಗೂ ಅಕ್ಷಯ ಟಿ.ಸಂಕಮ್ಮನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.