ಹಾನಗಲ್: ‘ಸಿದ್ದರಾಮಯ್ಯ ದುರಹಂಕಾರದಿಂದ ಮಾತನಾಡುತ್ತಿದ್ದಾರೆ. ಈ ರೀತಿಯ ವರ್ತನೆಗಳಿಂದ ಮತ್ತೆ ಸಿ.ಎಂ ಆಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಸುಧಾಕರ ಟೀಕಿಸಿದರು.
ಗುರುವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆರೋಪಗಳಿಗೆ ತಿರುಗೇಟು ನೀಡಿದರು. ‘ಪ್ರಚಾರ ಸಭೆಗಳಲ್ಲಿ ಏಕವಚನ ಸಂಬೋಧನೆ ಸಿದ್ದರಾಮ್ಯನವರ ಅಹಂಕಾರವನ್ನು ಬಿಂಬಿಸುತ್ತದೆ. ಇಂತಹ ನಡವಳಿಕೆಗಳಿಂದ ಉಪ ಚುನಾವಣೆಯನ್ನು ಗೆಲ್ಲುತ್ತೇವೆ ಎಂಬ ಕನಸಿನಲ್ಲಿದ್ದಾರೆ’ ಎಂದರು.
‘ಚುನಾವಣಾ ಉದ್ದೇಶದಿಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜನರ ಹಾದಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಇವರಿಗೆ ನಾಚಿಕೆಯಾಗುವುದಿಲ್ಲವೇ’ಎಂದು ಅವರು ಪ್ರಶ್ನಿಸಿದರು.
‘ವಿಧಾನಸಭೆಯಲ್ಲಿ ಕೋವಿಡ್ ಸಂಬಂಧ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದ ಸಿದ್ದರಾಮಯ್ಯನವರು ಆ ಪ್ರಶ್ನೆಗಳಿಗೆ ಉತ್ತರ ಕೇಳುವ ವ್ಯವಧಾನವನ್ನು ಪ್ರದರ್ಶಿಸಲಿಲ್ಲ. ಅಂಕಿ–ಅಂಶಗಳ ಸಮೇತ ಸದನದಲ್ಲಿ ಉತ್ತರಿಸಲು ನಾನು ಸಜ್ಜಾಗಿದ್ದರೆ ಪ್ರತಿಪಕ್ಷದವರು ಪಲಾಯನಗೈದರು’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.