ಹಾವೇರಿ: ನಗರಾಭಿವೃದ್ಧಿ ಸಚಿವರ ಒಪ್ಪಿಗೆಯೊಂದಿಗೆ ರಾಜ್ಯದ ಹತ್ತು ಕಡೆಗಳಲ್ಲಿ ‘ಕೈಗಾರಿಕಾ ಟೌನ್ಶಿಪ್’ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಹಾವೇರಿ ಜಿಲ್ಲೆಯಲ್ಲೂ ಒಂದು ಸಾವಿರ ಎಕರೆಯಲ್ಲಿ ಟೌನ್ಶಿಪ್ ನಿರ್ಮಾಣಗೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪೀಣ್ಯ, ದಾಬಸ್ಪೇಟೆ, ಧಾರವಾಡ ಜಿಲ್ಲೆಯ ಬೇಲೂರು, ಗೋಕುಲ ರಸ್ತೆ ಸೇರಿದಂತೆ ಮುಂತಾದ ಕಡೆ ಕೈಗಾರಿಕಾ ಪ್ರದೇಶಗಳಿದ್ದು, ಅಲ್ಲಿ ಟೌನ್ಶಿಪ್ ಸ್ಥಾಪಿಸಲು ಬಹು ದಿನಗಳಿಂದ ಬೇಡಿಕೆಯಿದೆ. ಇದರ ಜೊತೆ ಹಾವೇರಿ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಲಿರುವ ಟೌನ್ಶಿಪ್ ರಾಜ್ಯಕ್ಕೇ ಮಾದರಿಯಾಗಲಿದೆ ಎಂದರು.
ಬೆಂಗಳೂರು ನಗರದ ಕೈಗಾರಿಕಾ ಪ್ರದೇಶದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದೊಂದಿಗೆ, ಉತ್ತರ ಕರ್ನಾಟಕದಟೈರ್–2 ಮತ್ತು ಟೈರ್–3 ನಗರಗಳಲ್ಲಿಯೂ ಕೈಗಾರಿಕೆ ಸ್ಥಾಪಿಸುವ ಆಲೋಚನೆಯಿದೆ. ಮುಂಬರುವ ಅಧಿವೇಶನದಲ್ಲಿ ‘ಹೊಸ ಕೈಗಾರಿಕೆ ನೀತಿ’ ಜಾರಿಗೊಳ್ಳಲಿದೆ ಎಂದರು.
‘ಭೂ ಸುಧಾರಣಾ ಕಾಯ್ದೆ’ ಮತ್ತು ‘ಕರ್ನಾಟಕ ಇಂಡಸ್ಟ್ರೀಸ್ ಫೆಸಿಲಿಟೇಶನ್ ಕಾಯ್ದೆ’ಗೆ ತಿದ್ದುಪಡಿ ತರುವ ಮೂಲಕಕೈಗಾರಿಕೆಗಳ ಸ್ಥಾಪನೆಗಿದ್ದ ತೊಡಕನ್ನು ನಿವಾರಿಸಲಾಗಿದೆ. ಇದು ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ.ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಅದೇ ರೀತಿ ರಾಜ್ಯದಲ್ಲೂಕೈಗಾರಿಕೋದ್ಯಮಿಗಳು ನೇರವಾಗಿ ಭೂಮಿ ಖರೀದಿಸಿ, ಕೈಗಾರಿಕೆ ಸ್ಥಾಪಿಸಲು ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.