ಹಾವೇರಿ: ‘ಅಂಗವಿಕಲತೆ ಇರುವ ಮಕ್ಕಳನ್ನು ಹೀಯಾಳಿಸುವುದನ್ನು ಬಿಟ್ಟು ಗೌರವದಿಂದ ಕಾಣಬೇಕು. ಅವರಲ್ಲಿ ವಿಶೇಷವಾದ ಶಕ್ತಿ ಇರುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಸ್.ಎಚ್.ರೇಣುಕಾದೇವಿ ಹೇಳಿದರು.
ನಗರದ ಹೊಸಮಠದಲ್ಲಿ ಮಂಗಳವಾರ ನಡೆದ ವಿಶ್ವ ಅಂಗವಿಕಲದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ದಿನದಲ್ಲಿ ವೈದ್ಯಕೀಯ ಸೇವೆ ಬಹಳಷ್ಟು ಮುಂದುವರೆದಿದ್ದು, ಪಾಲಕರು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಅವರಲ್ಲಿ ಮೇಲು–ಕೀಳು, ಗಂಡು–ಹೆಣ್ಣು ಎಂದು ಭೇದ ಮಾಡಬಾರದು’ ಎಂದು ಸಲಹೆ ನೀಡಿದರು
‘ಅಂಗವಿಕಲ ಮಕ್ಕಳಿಗೆ ಆತ್ಮ ವಿಶ್ವಾಸ ತುಂಬಬೇಕು. ಪುರಾತನ ಶಾಸ್ತ್ರ, ವಚನ, ಚುಟುಕು, ಒಳಿತು ಕೆಡುಕುಗಳಬಗ್ಗೆ ಹೇಳಿ ಕೊಡಬೇಕು. ಸನ್ಮಾರ್ಗದಲ್ಲಿ ನಡೆಯಲು ಅವರನ್ನು ಪ್ರೇರೇಪಿಸಬೇಕು. ಕೌಶಲ ತರಬೇತಿ ನೀಡಿ ಬದುಕುವ ಛಲವನ್ನು ಬೆಳೆಸಬೇಕು’ ಎಂದರು.
ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಂಗವಿಕಲ ವಿದ್ಯಾರ್ಥಿಗಳಿಗೆ ಹಾಗೂ ಅಂಗವಿಕಲರಾಗಿದ್ದು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದವರನ್ನು ಸನ್ಮಾನಿಸಿದರು.
ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ನ್ಯಾಯಾಧೀಶರಾದ ಕೆ.ಶ್ರೀವಿದ್ಯಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಶ್ರೀಧರ್ ಶಾಸ್ತ್ರಿ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಪುಟ್ಟಪ್ಪ ಜಲದಿ, ಮೌನೇಶ ಬಡಿಗೇರ, ಎಚ್. ಆರ್. ಶಿವಕುಮಾರ, ಎಂ.ಕೆ. ಪಾಟೀಲ, ಎಸ್.ಐ. ಮಡಿವಾಳರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.