ಬ್ಯಾಡಗಿ: ಮೆಣಸಿನಕಾಯಿ ವಹಿವಾಟಿನಿಂದ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಹೊಂದಿದ ಬ್ಯಾಡಗಿಯಲ್ಲಿ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಕಳೆದ 14 ವರ್ಷಗಳಿಂದ ಮುಖ್ಯ ರಸ್ತೆಯನ್ನು ವಿಸ್ತರಿಸಬೇಕು ಎನ್ನುವ ಕೂಗು ಮುಂದುವರೆದಿದೆ. ಇನ್ನೂ ವಿಸ್ತರಣೆಯ ಭಾಗ್ಯ ಕೂಡಿ ಬರುತ್ತಿಲ್ಲ. ವಿವಿಧ ಜಿಲ್ಲೆಗಳಿಂದ ಮೆಣಸಿನಕಾಯಿ ಚೀಲಗಳನ್ನು ಹೊತ್ತುತರುವ ವಾಹನಗಳಿಂದಾಗಿ ಪಟ್ಟಣದ ಮುಖ್ಯರಸ್ತೆಯು ಸದಾ ವಾಹನದಟ್ಟಣೆ ಸಮಸ್ಯೆಯಿಂದ ಕೂಡಿದೆ.
ಮೆಣಸಿನಕಾಯಿ ತುಂಬಿದ ಸರಕು ಸಾಗಣೆ ವಾಹನಗಳು ಗಂಟೆಗಟ್ಟಲೆ ನಿಂತಲ್ಲೇ ನಿಲ್ಲುತ್ತವೆ. ಇದರಿಂದ ದಿನನಿತ್ಯ ಓಡಾಡುವ ಸಾರಿಗೆ ಬಸ್, ಆ್ಯಂಬುಲನ್ಸ್, ಕಾರು ಮತ್ತಿತರ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ರಸ್ತೆ ವಿಸ್ತರಣೆ ನನೆಗುದಿಗೆ ಬಿದ್ದಿದ್ದರಿಂದ ಮುಖ್ಯರಸ್ತೆಯಲ್ಲಿ ಒಳಚರಂಡಿ ಹಾಗೂ 24*7 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕೂಡಾ ವಿಳಂಬವಾಗಿವೆ.
ರಸ್ತೆಯ ಎರಡೂ ಬದಿಗೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಶೌಚದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳುತ್ತಿದೆ. ಈಚೆಗೆ ಹಾಲಿ ಮತ್ತು ಮಾಜಿ ಶಾಸಕರು ಸೇರಿಕೊಂಡು ಮುಖ್ಯರಸ್ತೆಗೆ ಹೊಂದಿಕೊಂಡ ಆಸ್ತಿ ಮಾಲೀಕರ ಸಭೆ ನಡೆಸಿದ್ದಾರೆ. ಸಮಸ್ಯೆಗೆ ಪರಿಹಾರ ಏನು ಎಂಬುದು ಇನ್ನು ಹೊರಬಂದಿಲ್ಲ.
ಎಪಿಎಂಸಿ ಸಭಾ ಭವನದಲ್ಲಿ ಈಚೆಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ವರ್ತಕರೆಲ್ಲರೂ, ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರ ಆರಂಭಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಜನವರಿಯಿಂದ ಏಕಮುಖ ಸಂಚಾರ ಆರಂಭಿಸುವುದಕ್ಕೆ ತಯಾರಿ ಮಾಡಲಾಗಿತ್ತು. ಆದರೆ, ಇದಕ್ಕೆ ಕೆಲವು ಸಂಘ–ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಸಮಸ್ಯೆ ಪರಿಹಾರವಾಗಲು ರಸ್ತೆ ವಿಸ್ತರಣೆ ಅನಿವಾರ್ಯವಾಗಿದೆ.
ಮುಖ್ಯರಸ್ತೆ ವಿಸ್ತರಣೆ ಕುರಿತು ಚಿಂತನೆ ನಡೆದಿದೆ. ಅಲ್ಲಿಯ ಆಸ್ತಿ ಮಾಲಿಕರ ಸಭೆ ನಡೆಸಲಾಗಿದೆ. ರಿಂಗ್ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆಬಸವರಾಜ ಶಿವಣ್ಣನವರ ಶಾಸಕ
ಮುಖ್ಯರಸ್ತೆ ಅಗಲೀಕರಣ ಮಾಡುವಂತೆ ಕಳೆದ 14 ವರ್ಷಗಳಿಂದ ಹೋರಾಟ ನಡೆಸಲಾಗಿದೆ. ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದು ಇದಕ್ಕೆ ತಾರ್ಕಿಕ ಅಂತ್ಯ ಸಿಗಬೇಕಿದೆಸುರೇಶ ಛಲವಾದಿ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.