ADVERTISEMENT

ಪದವಿ ಪರೀಕ್ಷೆ ರದ್ದತಿಗೆ ಒತ್ತಾಯ

ಪರೀಕ್ಷೆ ಶುಲ್ಕ ಮನ್ನಾಕ್ಕೆ ಎಸ್‌ಎಫ್‌ಐ ಕಾರ್ಯಕರ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 14:39 IST
Last Updated 12 ಜುಲೈ 2021, 14:39 IST
ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆ ರದ್ದು ಮಾಡಬೇಕು ಮತ್ತು ಪರೀಕ್ಷಾ ಶುಲ್ಕ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ಕಾರ್ಯಕರ್ತರು ಸೋಮವಾರ ಹಾವೇರಿ ನಗರದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು 
ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆ ರದ್ದು ಮಾಡಬೇಕು ಮತ್ತು ಪರೀಕ್ಷಾ ಶುಲ್ಕ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ಕಾರ್ಯಕರ್ತರು ಸೋಮವಾರ ಹಾವೇರಿ ನಗರದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು    

ಹಾವೇರಿ: ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ರದ್ದು ಮಾಡಲು ಹಾಗೂ ಪರೀಕ್ಷೆ ಶುಲ್ಕವನ್ನು ಮನ್ನಾ ಮಾಡಲು ಒತ್ತಾಯಿಸಿ ಸೋಮವಾರ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕಾಲೇಜು ಘಟಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯಡಾ.ರಮೇಶ ಎನ್.ತೆವರಿ ಅವರಿಗೆ ಮನವಿ ಸಲ್ಲಿಸಿದರು.

ಎಸ್ಎಫ್ಐ ಜಿಲ್ಲಾ ಮುಖಂಡ ಬೀರೇಶ ನೆಟಗಲ್ಲಣ್ಣನವರ ಮಾತನಾಡಿ, ‘ಸರ್ಕಾರ ಕೋವಿಡ್-19ರ ಭಾಗವಾಗಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಪದವಿ ಮತ್ತು ಸ್ನಾತಕೋತ್ತರ 1, 3 ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಲಾಕ್‌ಡೌನ್‌ ಅವಧಿಯಲ್ಲಿ 2,4 ಮತ್ತು ಆರನೇ ಸೆಮಿಸ್ಟರ್ ಆನ್‌ಲೈನ್‌ ತರಗತಿಗಳನ್ನು ನಡೆಸಲಾಯಿತು.

ADVERTISEMENT

ಇದೀಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪದವಿ ತರಗತಿಗಳ ಸೆಮಿಸ್ಟರ್ ಪರೀಕ್ಷೆಗಳು ಬರುವ ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದು, ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿ ಎರಡನೇ ಸೆಮಿಸ್ಟರ್ ಜತೆಗೆ ಮೊದಲನೇ ಸೆಮಿಸ್ಟರ್ ಪರೀಕ್ಷೆಗಳನ್ನೂ ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯವಾಗಿದೆ.

ಇಲ್ಲಿಯವರೆಗೂ ಕಾಲೇಜುಗಳು ಆರಂಭವಾಗಿಲ್ಲ. ಆನ್‌ಲೈನ್‌ ತರಗತಿಗಳು ನಡೆದರೂ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ಗ್ರಾಮೀಣ ಭಾಗದ ಬಹಳಷ್ಟು ವಿದ್ಯಾರ್ಥಿಗಳು ತರಗತಿಯಿಂದ ವಂಚಿತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ/ ವಿಶ್ವವಿದ್ಯಾಲಯವು ಪರೀಕ್ಷೆ ನಡೆಸುವುದು ಎಷ್ಟು ಸರಿ? ವಿಶ್ವವಿದ್ಯಾಲಯದ ತಪ್ಪನ್ನು ವಿದ್ಯಾರ್ಥಿಗಳ ತಲೆ ಮೇಲೆ ಹೊರಿಸುತ್ತಿರುವುದು ತೀವ್ರ ಖಂಡನೀಯ ಎಂದರು.

ಲಾಕ್‌ಡೌನ್‌ ಪರಿಣಾಮದಿಂದ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಬಹುತೇಕ ಕಾರ್ಮಿಕ, ಬಡಜನರ ಮಕ್ಕಳು ಸಿಲುಕಿದ್ದಾರೆ. ಆದ್ದರಿಂದ ಈ ಸಾಲಿನ ಪರೀಕ್ಷೆ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಬೇಕು ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆಯನ್ನು ಸರ್ಕಾರ/ ವಿಶ್ವವಿದ್ಯಾಲಯ ಹೊರಬೇಕೆಂದು ಆಗ್ರಹಿಸಿದರು.

ಗಗನದೀಪ ವಡ್ಡರ, ಅಕ್ಬರ್ ಅರಗಂಜಿ, ನಂದೀಶ ಹರಿಜನ, ಪ್ರಕಾಶ ಕರಿಬಸಪ್ಪನವರ, ಹೊನ್ನಪ್ಪ ತಳವಾರ, ಚೇತನಕುಮಾರ ವಿಜಾಪುರ, ರವಿ ಹರಿಜನ, ರೇಣುಕಾ ಉಮ್ಮನಗೌಡ್ರ, ರೂಪಾ ಮಲ್ಲಾಡದ, ಪುಷ್ಪಾ ಕಮತರ, ಚೈತ್ರಾ ದುಂಡಣ್ಣನವರ, ರಂಜಿತಾ ಸವಣೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.