ADVERTISEMENT

ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಿ: ರಮೇಶ ದುಗ್ಗತ್ತಿ

ರಾಜ್ಯದಲ್ಲೇ ಅತಿ ಹೆಚ್ಚು ಇನ್‌ಸ್ಪೈರ್‌ ಅವಾರ್ಡ್ ಪಡೆದ ಕೀರ್ತಿಗೆ ಹಾವೇರಿ ಜಿಲ್ಲೆ ಪಾತ್ರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 13:44 IST
Last Updated 29 ಜನವರಿ 2020, 13:44 IST
ಹಾವೇರಿಯ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಯಕ್ರಮವನ್ನು ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು
ಹಾವೇರಿಯ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಯಕ್ರಮವನ್ನು ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು   

ಹಾವೇರಿ: ‘ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚು ಆಸಕ್ತಿವಹಿಸಿ ಹೊಸ-ಹೊಸ ವಿಜ್ಞಾನ ಮಾದರಿಗಳನ್ನು ಅವಿಷ್ಕಾರಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ ದುಗ್ಗತ್ತಿ ಹೇಳಿದರು.

ನಗರದ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯಿತಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ಇನ್‌ಸ್ಪೈರ್‌ ಅವಾರ್ಡ್‌-ಮಾನಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳ ಆಸಕ್ತಿ ಜೊತೆಗೆ ಶಿಕ್ಷಕರ ಮಾರ್ಗದರ್ಶನ ಇದ್ದರೆ, ವಿದ್ಯಾರ್ಥಿಗಳು ಉತ್ತಮ ಸಾಧನೆಗೈಯುತ್ತಾರೆ. ಹೊಸತನ ಹಾಗೂ ಸಮಾಜದಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸುವ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಬೇಕು. ಹೊಸ ಆವಿಷ್ಕಾರಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಿಲ್ಲೆಯ ವಿದ್ಯಾರ್ಥಿಗಳು ಎರಡು ವರ್ಷಗಳಿಂದ ಸತತ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿರುವುದು ಅಭಿನಂದನೀಯ’ ಎಂದು ಹೇಳಿದರು.

ADVERTISEMENT

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ‘ಇನ್‌ಸ್ಪೈರ್‌ ಅವಾರ್ಡ್ ಕಾರ್ಯಕ್ರಮ ವಿಶಿಷ್ಟವಾಗಿದ್ದು, ಬಾಲವಿಜ್ಞಾನಿಗಳ ಪ್ರತಿಭೆ ಹೊರತರಲು ಉತ್ತಮ ವೇದಿಕೆಯಾಗಿದೆ’ ಎಂದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ವಿದ್ಯಾರ್ಥಿಗಳು ಸೃಜನಶೀಲತೆ, ಹೊಸತನದಡಿ ವಿಜ್ಞಾನ ಮಾದರಿ ತಯಾರಿಸಿದ್ದಾರೆ. ಈ ಪ್ರದರ್ಶನ ಕೇವಲ ನಗರದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾಗದ ಮಕ್ಕಳು ಭಾಗವಹಿಸಿ ತಮ್ಮ ಸೃಜನಶೀಲತೆ, ಕ್ರಿಯಾಶೀಲತೆ ಪ್ರದರ್ಶಿಸಿರುವುದು ಅಭಿನಂದನಾರ್ಹವಾಗಿದೆ’ ಎಂದರು.

ಡಯಟ್ ಪ್ರಾಂಶುಪಾಲರಾದ ಜಿ.ಎಂ. ಬಸವಲಿಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಪ್ರದರ್ಶನದ ನಿರೀಕ್ಷಕರಾದ ಗುಜರಾತಿನ ಚಂದನ್ ಗೌತಮ್ ಸಮಾರಂಭದಲ್ಲಿ ಮಾತನಾಡಿದರು.

ಗಮನ ಸೆಳೆದ ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳು:ಸಾವಯವ ಕೃಷಿ, ಮಣ್ಣು ಹಾಗೂ ಕೀಟ ನಿರ್ವಹಣೆ, ಕಳೆ ನಿರ್ವಹಣೆ, ಸಮಯ ಆಧಾರಿತ ಯಂತ್ರ, ಎಟಿಎಂ ಸೆಕ್ಯುರಿಟಿ, ವಿದ್ಯುತ್ ಚಾಲಿತ ಶಾಲಾ ಘಂಟೆ, ವ್ಯಾಕ್ಯೂಮ್ ಕ್ಲೀನರ್, ಮಿಶ್ರ ಬೇಸಾಯ, ನೀರನ್ನು ಸಂರಕ್ಷಿಸುವ ಸಾಧನ, ತಾರಸಿ ಉದ್ಯಾನ, ಶಕ್ತಿಯ ಮಿತವ್ಯಯ, ಸಿಲಿಂಗ್ ಪ್ಯಾನ್ ಬಳಕೆಯಿಂದ ಪುನರ್ ವಿದ್ಯುತ್ತ ಉತ್ಪಾದನೆ, ತ್ಯಾಜ್ಯ ವಸ್ತುಗಳಿಂದ ವಿದ್ಯುತ್ ಉತ್ಪಾದನೆ, ತ್ಯಾಜ್ಯ ನಿರ್ವಹಣಾ ಸಂವಹನ ಘಟಕ, ಫಾರೆಸ್ಟ್ ಫೈರ್ ಡಿಟೆಕ್ಷನ್ ಒಳಗೊಂಡಂತೆ ಹಲವು ವೈವಿಧ್ಯಮಯ ವಿಜ್ಞಾನ ಮಾದರಿಗಳು ವಿದ್ಯಾರ್ಥಿಗಳ ಪ್ರತಿಭೆಗೆ ಸಾಕ್ಷಿಯಾಗಿವೆ. ಜಿಲ್ಲೆಯ 549ಕ್ಕೂ ಹೆಚ್ಚುನ ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡಿವೆ.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರು ವಿಜ್ಞಾನ ವಸ್ತು ಪ್ರದರ್ಶನದ ಮಳೆ ತರಿಸುವ ವಿಜ್ಞಾನ ಮಾದರಿಗೆ ಚಾಲನೆ ನೀಡಿ ವೀಕ್ಷಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್.ಪಾಟೀಲ, ಡಯಟ್‍ನ ಹಿರಿಯ ಉಪನ್ಯಾಸಕರಾದ ಝಡ್ ಖಾಜಿ ಹಾಗೂ ಎಂ.ಬಿ.ಅಂಬಿಗೇರ, ಇನ್‌ಸ್ಪೈರ್‌ ಅವಾರ್ಡ್ ನೋಡಲ್ ಅಧಿಕಾರಿಗಳಾದ ಲತಾಮಣಿ ಟಿ.ಎಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.