ರಾಣೆಬೆನ್ನೂರು:‘ಸರ್ವರೂ ಸಂಪಲೇ, ನಾಡು ತಂಪಲೇ ಪರಾಕ್...’
–ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದ ಕರಿಯಾಲದಲ್ಲಿ ವಿಜಯದಶಮಿ ಪ್ರಯುಕ್ತಗುರುವಾರ ಸಂಜೆ ನಡೆದ ಕಾರ್ಣಿಕದ ನುಡಿಗಳು.ದೇವರಗುಡ್ಡ ಗ್ರಾಮದ ಗೊರವಯ್ಯ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದರು.
ಈ ಕಾರ್ಣಿಕದ ನುಡಿಯನ್ನು ಆ ಬಳಿಕ ವಿಶ್ಲೇಷಿಸುವುದು ವಾಡಿಕೆ. ಅದರ ಪ್ರಕಾರ ಈ ಕಾರ್ಣಿಕವನ್ನು ಎಲ್ಲರಿಗೂ ಒಳಿತಾಗುವ ಧನಾತ್ಮಕ ನುಡಿ ಎಂದು ವಿಶ್ಲೇಷಿಸಲಾಗಿದೆ.
‘ಸರ್ವರೂ ಸಂಪಲೇ’ ಎಂದರೆ ಮಳೆ ಬೆಳೆ ಚೆನ್ನಾಗಿ ಆಗಿ ಎಲ್ಲಾ ವಿಧಗಳಲ್ಲಿ ಸಮೃದ್ದಿಯಾಗುವುದು ಎಂದರ್ಥ. ‘ನಾಡು ತಂಪು’ ಎಂದರೆ ಭೂಮಿ ತಂಪು ಎಂದಾಗುತ್ತದೆ. ನಾಡಿನಲ್ಲಿರುವ ಎಲ್ಲರಿಗೂ ಒಳ್ಳೆಯದಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಬರಗಾಲವಿದ್ದು, ಈ ಬಾರಿ ಎಲ್ಲಡೆ ಉತ್ತಮ ಮಳೆ- ಬೆಳೆಯಾಗಲಿದೆ ಎಂಬುದೇ ‘ತಂಪಲೇ’ ಎಂಬುದರ ಮುನ್ಸೂಚನೆಯ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಭಾಗದಲ್ಲಿ ಎರಡು ಬಾರಿ ಕಾರ್ಣಿಕ ನುಡಿಯಲಾಗುತ್ತದೆ. ಭಾರತ ಹುಣ್ಣಿಮೆಯಂದು ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಸುಕ್ಷೇತ್ರ ಮೈಲಾರ ಮತ್ತು ವಿಜಯ ದಶಮಿ ನವರಾತ್ರಿ ದಸರಾ ಹಬ್ಬದಲ್ಲಿ ತಾಲ್ಲೂಕಿನ ದೇವರಗುಡ್ಡದಲ್ಲಿ ಕಾರ್ಣಿಕ ನುಡಿಯುತ್ತಿದ್ದು, ಲಕ್ಷಾಂತರ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಬಂದು ಪ್ರಾರ್ಥಿಸುತ್ತಾರೆ.
ಕಾರ್ಣಿಕದ ಅಜ್ಜ:
ಕಾರ್ಣಿಕ ನುಡಿಯುವ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರನ್ನು ಅಜ್ಜನವರು ಎಂದೇ ಸಂಬೋಧಿಸುತ್ತಾರೆ. ಅವರು9 ದಿನಗಳವರೆಗೆ ಹಾಲು ಮತ್ತು ಹಣ್ಣುಗಳನ್ನು ಮಾತ್ರ ಸೇವಿಸಿ ಉಪವಾಸ ವೃತ ಆಚರಿಸುತ್ತಾರೆ. ಕಾರ್ಣಿಕದ ದಿನದಂದು ಅಂದಾಜು 25 ಅಡಿ ಎತ್ತರದ ಬಿಲ್ಲನ್ನೇರಿ, ಸುತ್ತಲೂ ನೋಡಿ ಜನಸಾಗರದ ಮಧ್ಯೆ ಕಾರ್ಣಿಕ ನುಡಿದು, ಕೆಳಗೆ ಬೀಳುವುದು ವಾಡಿಕೆ. ಕಾರ್ಣಿಕದ ನುಡಿಯನ್ನು ಮಳೆ -ಬೆಳೆ, ರೈತ, ಸಮಾಜ, ರಾಜಕೀಯ ಮತ್ತಿತರ ಆಯಾಮಗಳ ಮೇಲೆ ವಿಶ್ಲೇಷಿಸಲಾಗುತ್ತದೆ. ಈ ಬಾರಿಯ ನುಡಿಯು ಜನತೆಗೆ ಖುಷಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.