ಹಾವೇರಿ: ‘ಸಮಾಜವನ್ನು ಸಮೃದ್ಧಯುತವಾಗಿ ಕಟ್ಟುವ ನಿಟ್ಟಿನಲ್ಲಿ ತ್ಯಾಗ ಮತ್ತು ಔದಾರ್ಯಗಳ ಮೂಲಕ ದಾನದ ಸೇವೆ ಮಾಡಿ, ಅಮರರಾಗುಳಿದವರು ತ್ಯಾಗವೀರ ಶಿರಸಂಗಿ ಲಿಂಗರಾಜರು’ ಎಂದು ವಾಣಿಜ್ಯ ಅಧ್ಯಾಪಕ ಡಾ.ಗುರುಪಾದಯ್ಯ ಸಾಲಿಮಠ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ 160ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜಮುಖಿಯಾಗಿ ತಮ್ಮ ಸರ್ವಸ್ವವನ್ನೂ ವಿನಿಯೋಗ ಮಾಡಿದ ಲಿಂಗರಾಜರು ಕೃಷಿ, ಸಹಕಾರ, ಶಿಕ್ಷಣ, ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ತಮ್ಮದೇ ಆದಂತಹ ಸೇವೆ ನೀಡಿರುವುದು ಅವಿಸ್ಮರಣೀಯ ಸಂಗತಿ. ನಿರಂತರವಾಗಿ ಸಮಾಜದೊಟ್ಟಿಗೆ ಬಂಧುತ್ವವನ್ನು ಸಾಧಿಸಿ ಪ್ರಮುಖರೊಟ್ಟಿಗೆ ಶ್ರಮಕಾರ್ಯಗಳನ್ನು ಹೆಗಲು ನೀಡಿ ಮಾಡಿರುವುದು ಸ್ಫೂರ್ತಿದಾಯಕವಾಗಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎಂ.ಎಸ್. ಯರಗೊಪ್ಪ ವಹಿಸಿದ್ದರು. ಪ್ರಾಚಾರ್ಯ ಪ್ರೊ.ಜೆ. ಆರ್. ಸಿಂಧೆ ಉಪಸ್ಥಿತರಿದ್ದರು. ಪ್ರೊ. ದೀಪಾ ಸಂಗಮ ಪ್ರಾರ್ಥಿಸಿದರು. ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ.ಡಿ.ಎ. ಕೊಲ್ಲಾಪುರೆ ಸ್ವಾಗತಿಸಿ, ನಿರೂಪಿಸಿದರು. ಡಾ.ಬಿ.ಎನ್. ವಾಸುದೇವ ನಾಯ್ಕ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.