ಪ್ರಾಧಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ರಾಣೆಬೆನ್ನೂರು: ಅಜಾಗರೂಕತೆಯಿಂದ ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿ ಪಾದಚಾರಿ ಮಹಿಳೆಗೆ ಡಿಕ್ಕಿ ಪಡಿಸಿ ಮಹಿಳೆಯ ಸಾವಿಗೆ ಮತ್ತು ಮೂವರಿಗೆ ಗಾಯಪಡಿಸಿ, 3 ವರ್ಷ ಮಗುವಿಗೆ ಸಾದಾ ಗಾಯ ಪಡಿಸಿದ್ದ ನಾಗಶ್ರೀ ನಾಗರಾಜ ಗುತ್ತಲ ಅಪರಾಧ ಸಾಬೀತಾಗಿದೆ.
ಈ ಅಪರಾಧಕ್ಕಾಗಿ ಸೆಷನ್ ನ್ಯಾಯಾಧೀಶ ಬಿ.ಸಿದ್ಧರಾಜು ಅವರು, ಅಪರಾಧಿಗೆ 2 ವರ್ಷ 1 ತಿಂಗಳು ಜೈಲು ಶಿಕ್ಷೆ ಮತ್ತು ₹7 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.
ಶಿಕ್ಷೆಗೊಳಗಾದ ನಾಗಶ್ರೀ ಯಾವುದೇ ಚಾಲನಾ ಪರವಾನಿಗೆ ಇಲ್ಲದೇ ಕಾರನ್ನು ಚಲಾಯಿಸಿಕೊಂಡು ಹೋಗಿ ಅಪಘಾತ ಮಾಡಿದ್ದರು. ಈ ಅಪಘಾತದಲ್ಲಿ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಗಂಗವ್ವ ಸ್ಥಳದಲ್ಲಿಯೇ ಮೃತ ಪಟ್ಟು, ಮೂವರು ಗಾಯಗೊಂಡು, 3 ವರ್ಷದ ಮಗುವಿಗೆ ಸಾದಾ ಗಾಯವಾದ ಘಟನೆ ದೇವರಗುಡ್ಡ ಗ್ರಾಮ ಪಂಚಾಯಿತಿ ಬಳಿ 2022 ನವೆಂಬರ್ 11ರಂದು ನಡೆದಿತ್ತು.
ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗ್ರಾಮೀಣ ಠಾಣೆ ಸಿಪಿಐ ಮೋತಿಲಾಲ್ ಪವಾರ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸರ್ಕಾರಿ ಅಭಿಯೋಜಕಿ ಕವಿತಾ ಎಸ್.ಜಿ ಅವರು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.