ADVERTISEMENT

ಅಕ್ರಮ ಗಣಿಗಾರಿಕೆ ತಡೆಗಟ್ಟಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 13:24 IST
Last Updated 12 ಅಕ್ಟೋಬರ್ 2021, 13:24 IST
ಎಸ್.ಆರ್.ಹಿರೇಮಠ
ಎಸ್.ಆರ್.ಹಿರೇಮಠ   

ಹಾವೇರಿ: ರಟ್ಟೀಹಳ್ಳಿ ತಾಲ್ಲೂಕು ಚಟ್ನಳ್ಳಿ ಗ್ರಾಮದಲ್ಲಿ ಜಿ.ಎಂ.ಶುಗರ್ಸ್‌ ಮತ್ತು ಎನರ್ಜಿ ಲಿ, ಇವರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಕೂಡಲೇ ಇದನ್ನು ತಡೆಗಟ್ಟಬೇಕು. ಕಂಪನಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಜಿ.ಎಂ ಶುಗರ್ಸ್ ಮತ್ತು ಎನರ್ಜಿ ಲಿ.ನವರು ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿ 1 ಎಕರೆ 20 ಗುಂಟೆ ಜಾಗವನ್ನು ಪಡೆದಿದ್ದಾರೆ. ಮಂಜೂರಾದ ಜಾಗಬಿಟ್ಟು ಅನಧಿಕೃತ ಜಾಗದಲ್ಲಿ ಕ್ರಷರ್‌ಗಳಿಂದ ಕಲ್ಲು ಗಣಿಗಾರಿಕೆಯನ್ನು ಆರಂಭಿಸಿ ಸಾವಿರಾರು ಲೋಡ್ ಜಲ್ಲಿಕಲ್ಲನ್ನು ಸಂಗ್ರಹಿಸಿದ್ದಾರೆ. ಕೂಡಲೇ ಕ್ರಷರ್‌ ಯಂತ್ರಗಳನ್ನು ಮುಟ್ಟುಗೋಲು ಹಾಕಿಕೊಂಡು, ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಅಪಾರ ಪ್ರಮಾಣದ ಜಲ್ಲಿಕಲ್ಲು, ಕಟ್ಟಡಕಲ್ಲು ಹಾಗೂ ಮುರಮ್‌ ಅನ್ನು ಸಂಗ್ರಹಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದನ್ನು ದೃಢೀಕರಿಸಿದ್ದಾರೆ. ಗಣಿಗಾರಿಕೆಯಿಂದ ಹತ್ತಿರದ ಕುಡಿಯುವ ನೀರಿನ ಸಂಗ್ರಹಣಾ ಘಟಕಕ್ಕೆ ತೊಂದರೆಯಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ ಎಂದರು.

ADVERTISEMENT

ದೊಡ್ಡ ದೊಡ್ಡ ಬಂಡೆಗಳನ್ನು ಬ್ಲಾಸ್ಟ್ ಮಾಡುವುದರಿಂದ ಜಮೀನಿನಲ್ಲಿರುವ ಕೊಳವೆಬಾವಿಗಳ ಅಂತರ್ಜಲಮಟ್ಟ ಕುಸಿಯುತ್ತಿದೆ. ಜಿ.ಎಂ. ಶುಗರ್ಸ್‍ನವರು ಅಲ್ಲಿರುವ ಖನಿಜ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡುತ್ತಿದ್ದಾರೆ. ಈ ಕುರಿತು ಕೂಡಲೇ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಮಾಜಿ ಅಧ್ಯಕ್ಷ ಎಂ.ಸಿ.ಹಾವೇರಿ, ನಾಗಪ್ಪ ದೊಡ್ಡಮನಿ, ಬಸನಗೌಡ ಬೇವಿನಹಳ್ಳಿ, ಮಹಮ್ಮದ್‌ ಸಾಬ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.