ಹಾವೇರಿ: ವಿದ್ಯಾಥಿಗಳು ಮಾನಸಿಕ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಮತ್ತು ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಯಾದವ ವನಮಾಲಾ ಆನಂದರಾವ್ ಹೇಳಿದರು.
ನಗರದ ಸಿಂದಗಿ ಶಾಂತವಿರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಕೂಡ ಮಾನಸಿಕ ಅಸ್ವಸ್ಥರನ್ನು ಗೌರವದಿಂದ ಕಾಣಬೇಕು. ಮಾನಸಿಕ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಸಮಾಜದಲ್ಲಿ ಘನತೆಯಿಂದ ಬದುಕುವ ಅವಕಾಶಗಳನ್ನು ಮಾಡಿಕೊಡಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಪುಟ್ಟರಾಜು ಮಾತನಾಡಿ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಆರೋಪಿಯನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವುದಿಲ್ಲ. ಅವರಿಗೆ ಚಿಕಿತ್ಸೆ ನೀಡಿದ ನಂತರ ವಿಚಾರಣೆಗೆ ಒಳಪಡಿಸಲಾಗುತ್ತದೆ. ಮಾನಸಿಕ ಅಸ್ವಸ್ಥತೆಯ ಬಗ್ಗೆ ತಿಳಿದುಕೊಂಡು ಇತರರಿಗೂ ತಿಳಿಸಿ. ಉತ್ತಮ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ಹೇಳಿದರು.
ಹಿರಿಯ ವಕೀಲ ಜಿ.ಕೆ ಕಮ್ಮಾರ ಮಾತನಾಡಿ, ಮಾನಸಿಕ ಆರೋಗ್ಯದಿಂದ ಬಳಲುತ್ತಿರುವವರಿಗೆ ಸರಿಯಾದ ಚಿಕಿತ್ಸೆ, ರಕ್ಷಣೆ ನೀಡುವ ಉದ್ದೇಶದಿಂದ 1987ರಲ್ಲಿ ಮಾನಸಿಕ ಆರೋಗ್ಯ ಕಾಯ್ದೆಯನ್ನು ಜಾರಿಯಾಗಿತ್ತು. ಇದರಲ್ಲಿ ಮಾನಸಿಕ ಆರೋಗ್ಯದಿಂದ ಬಳಲುತ್ತಿದವರ ಸಂರಕ್ಷಣೆ ಕುರಿತು ಯಾವುದೇ ಅಂಶಗಳು ಇಲ್ಲದ ಕಾರಣ 2017ರಲ್ಲಿ ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆ ಎಂದು ಮಾರ್ಪಾಡು ಮಾಡಲಾಯಿತು ಎಂದರು.
ಜಿಲ್ಲಾ ಮನೋವೈದ್ಯ ಡಾ.ವಿಜಯಕುಮಾರ ಬಳಿಗಾರ ಅವರು ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಮತ್ತು ನಿವಾರಣೆಗಳ ಕುರಿತು ಉಪನ್ಯಾಸ ನೀಡಿದರು.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚನ್ನಬಸಯ್ಯ ವಿರಕ್ತಮಠ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಿಂದಗಿ ಶಾಂತವಿರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪ್ರಾಚಾರ್ಯರಾದ ಡಾ.ಸಿ.ಎನ್ ಗೌಡರ ಮಾತನಾಡಿದರು. ಉಪನ್ಯಾಸಕ ಡಾ.ಸಿದ್ದನಗೌಡ ಕೆ.ವಿ ಮಾನಸಿಕ ಅಸ್ವಸ್ಥತೆ ಕುರಿತು ಮಾಹಿತಿ ನೀಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅಶೋಕ ಸಿ. ನೀರಲಗಿ, ಕಾರ್ಯದರ್ಶಿ ಈಶ್ವರ ಎಸ್. ನಂದಿ, ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್ ಹಾವನೂರ, ಕಾಲೇಜಿನ ಅಧ್ಯಾಪಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.