ಹಾವೇರಿ: ನಗರದ ಸರ್ಕಾರಿ ‘ಶುಶ್ರೂಷಾ ಶಾಲೆ’ ಹಾಗೂ ವಸತಿ ನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ₹3 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಜೂರು ಮಾಡಿದ್ದಾರೆ.
ಶುಶ್ರೂಷಾ ಶಾಲೆ ಆರಂಭಗೊಂಡು 10 ವರ್ಷ ಕಳೆದರೂ ಸ್ವಂತ ಕಟ್ಟಡವಿಲ್ಲದೆ, ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸರ್ಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ (ಎ.ಎನ್.ಎಂ.ಟಿ.ಸಿ) ಕಟ್ಟಡದಲ್ಲೇ ನಡೆಯುತ್ತಿದೆ.
ಸ್ವಂತ ಹಾಸ್ಟೆಲ್ ಕಟ್ಟಡವಿಲ್ಲದ ಕಾರಣ ಜಿಎನ್ಎಂ (ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿ) ಕೋರ್ಸ್ ಓದುತ್ತಿದ್ದ ನೂರಾರು ವಿದ್ಯಾರ್ಥಿನಿಯರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಇಂದಿರಾಗಾಂಧಿ ಮಹಿಳಾ ವಸತಿ ನಿಲಯದಲ್ಲಿ 2015–16ರಿಂದ ಆಹಾರ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಕೊರೊನಾ ಸಂದರ್ಭ ಬಿಸಿಎಂ ಹಾಸ್ಟೆಲ್ ಮುಚ್ಚಿದ ಪರಿಣಾಮ, ಶುಶ್ರೂಷಾ ಶಾಲೆಯ ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಮನೆಗೆ ತೆರಳಿದ್ದರು. ಇದರಿಂದ ಶಿಕ್ಷಣ ಮತ್ತು ಪ್ರಾಯೋಗಿಕ ಜ್ಞಾನದಿಂದ ವಂಚಿತರಾಗಿದ್ದರು.
‘ಕೆಎಚ್ಎಸ್ಆರ್ಡಿಪಿಯವರು ಜಿಲ್ಲಾಸ್ಪತ್ರೆಯ ಆವರಣದ ಖಾಲಿ ಜಾಗವನ್ನು ಪರಿಶೀಲಿಸಿ ಹೋಗಿದ್ದಾರೆ. ಒಂದು ವರ್ಷದಲ್ಲಿ ನೂತನ ಕಟ್ಟಡ ನಿರ್ಮಾಣವಾದರೆ, ಶುಶ್ರೂಷಾ ಶಾಲೆ ಮತ್ತು ಹಾಸ್ಟೆಲ್ ಕಟ್ಟಡ ಕೊರತೆಯ ಸಮಸ್ಯೆ ನಿವಾರಣೆಯಾಗುತ್ತದೆ.ಎ.ಎನ್.ಎಂ.ಟಿ.ಸಿ ಕಟ್ಟಡದ ಮೇಲ್ಭಾಗ ಎರಡನೇ ಮಹಡಿ ನಿರ್ಮಾಣಕ್ಕೂ ಮಂಜೂರಾತಿ ಸಿಕ್ಕಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಬಗ್ಗೆ ಪ್ರಜಾವಾಣಿಯಲ್ಲಿ ‘ಹಾಸ್ಟೆಲ್ ಕೊರತೆ: ವ್ಯಾಸಂಗಕ್ಕೂ ಕುತ್ತು’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ, ವಿದ್ಯಾರ್ಥಿನಿಯರ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಬೆಳಕು ಚೆಲ್ಲಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.