ADVERTISEMENT

ದಿನಸಿ, ತರಕಾರಿ ಸಾಗಣೆಗೆ ನಿರ್ಬಂಧವಿಲ್ಲ

ಜಿಲ್ಲೆಯ ವರ್ತಕರೊಂದಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ವಿಡಿಯೊ ಕಾನ್ಫರೆನ್ಸ್‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 10:49 IST
Last Updated 31 ಮಾರ್ಚ್ 2020, 10:49 IST
ಹಾವೇರಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಧಿಕಾರಿಗಳು ಹಾಗೂ ವರ್ತಕರೊಂದಿಗೆ ಸೋಮವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಪ್‌ ಶಶಿ ಇದ್ದಾರೆ
ಹಾವೇರಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಧಿಕಾರಿಗಳು ಹಾಗೂ ವರ್ತಕರೊಂದಿಗೆ ಸೋಮವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಪ್‌ ಶಶಿ ಇದ್ದಾರೆ   

ಹಾವೇರಿ: ‘ದಿನಸಿ, ತರಕಾರಿ ಸೇರಿದಂತೆ ಯಾವುದೇ ತರದ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ನಿರ್ಭಂಧವಿಲ್ಲ. ಆದರೆ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರ ಸಾಗಾಣಿಕೆಗೆ ಮಾತ್ರ ನಿರ್ಭಂಧವಿದೆ. ದಿನಸಿ, ತರಕಾರಿಗಳನ್ನು ಹೊರರಾಜ್ಯ, ಹೊರ ಜಿಲ್ಲೆಯಿಂದ ತರಿಸಿಕೊಳ್ಳಲು ಹಾಗೂ ತೆಗೆದುಕೊಂಡು ಹೋಗಲು ಅವಕಾಶವಿದೆ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಧಿಕಾರಿಗಳು ಹಾಗೂ ವರ್ತಕರೊಂದಿಗೆ ಸೋಮವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು.

ಮೊದಲಿಗೆ ವರ್ತಕರ ಸಮಸ್ಯೆಯನ್ನು ಆಲಿಸಿದ ಅವರು, ಜಿಲ್ಲೆಯಿಂದ ಹೊರಗಡೆ ಸಾಮಗ್ರಿಗಳ ಸಾಗಾಣಿಕೆಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು ಹಾಗೂ ಜಿಲ್ಲೆಯ ಒಳಗೆ ಅಗತ್ಯ ವಸ್ತುಗಳ ಸಾಗಾಣಿಕೆ ವಾಹನಗಳಿಗೆ ಆಯಾ ತಾಲ್ಲೂಕು ತಹಶೀಲ್ದಾರ್‌ಗಳಿಂದ ಪರವಾನಗಿ ಪಡೆಯುವಂತೆ ಸಲಹೆ ನೀಡಿದರು. ಹೊರ ಜಿಲ್ಲೆಯಿಂದ ಸಾಮಗ್ರಿ ತರಲು ಯಾವುದೇ ನಿರ್ಬಂಧ ಇರುವುದಿಲ್ಲ. ವರ್ತಕರಿಗೆ ಯಾವುದೇ ಅನಾನುಕೂಲವಾಗದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ADVERTISEMENT

ಹೆದ್ದಾರಿಯಲ್ಲಿ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಸರಕು ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ವಾಹನಗಳು ಸರಾಗವಾಗಿ ಸಾಗಲು ಸರ್ಕಾರ ಅನುಮತಿ ನೀಡಿದೆ. ಕಾರಣ ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಜಿಲ್ಲೆಗೆ ದಿನಸಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ತರಿಸಿಕೊಳ್ಳಬಹುದು. ದಿನಸಿಗಳ ಕೊರತೆಯಾಗದಂತೆ ದಾಸ್ತಾನಿಗೆ ಜಿಲ್ಲಾಡಳಿತ ಮುಕ್ತ ಅವಕಾಶ ಕಲ್ಪಿಸುತ್ತದೆ ಎಂದು ವರ್ತಕರಿಗೆ ತಿಳಿಸಿದರು.

ಹೆಚ್ಚಿನ ದರದಲ್ಲಿ ಮಾರಾಟ ಮಾಡಬೇಡಿ

ದಿನಸಿ ಮಾರಾಟ ಮಾಡಲು ಜಿಲ್ಲಾಡಳಿತ ಯಾವುದೇ ಸಮಯವನ್ನು ನಿಗದಿಪಡಿಸಿಲ್ಲ. ಜನರಿಗೆ ತೊಂದರೆಯಾಗಂತೆ ದಿನದ 24 ಗಂಟೆ ಅಂಗಡಿಗಳನ್ನು ತೆರೆದು ದಿನಸಿಗಳನ್ನು ಮಾರಾಟ ಮಾಡಬಹುದು. ‘ಡೋರ್‌ ಡೆಲಿವರಿ’ಗೆ ಜಿಲ್ಲಾಡಳಿತ ಪ್ರೋತ್ಸಾಹ ನೀಡುತ್ತದೆ. ಗ್ರಾಹಕರು ದೂರವಾಣಿ ಕರೆ ಮಾಡಿದರೆ ಅವರ ಮನೆಗೆ ದಿನಬಳಕೆ ಸಾಮಗ್ರಿ ತಲುಪಿಸುವ ವ್ಯವಸ್ಥೆ ಕೈಗೊಂಡರೆ ಒಳ್ಳೆಯದು. ಆದರೆ ಎಂ.ಆರ್.ಪಿ. ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು. ಪ್ರತಿ ಕಿರಾಣಿ ಅಂಗಡಿಯ ಮುಂದೆ ಸಾಮಗ್ರಿಗಳ ದರಪಟ್ಟಿಯನ್ನು ಪ್ರಕಟಿಸುವಂತೆ ತಿಳಿಸಿದರು.

ತರಕಾರಿ ಮಾರಾಟ, ಎಲೆ, ಶುಂಠಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಹೊರ ಜಿಲ್ಲೆಗೆ ಸಾಗಾಣಿಕೆ ಮಾಡುವುದಾದರೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದರು. ಕೃಷಿ ಚಟುವಟಿಕೆಗೆ ಯಾವುದೇ ಅಡೆತಡೆ ಬೇಡ. ಆಹಾರ ಧಾನ್ಯಗಳಿಗೆ ಯಾವುದೇ ಕೊರತೆಯಾಗದಂತೆ ಕ್ರಮವಹಿಸಿ ಸ್ಥಳೀಯವಾಗಿ ತಾಂತ್ರಿಕ ಸಮಸ್ಯೆಗಳನ್ನು ತಹಶೀಲ್ದಾರ್‌ ಮಟ್ಟದಲ್ಲಿ ಬಗೆಹರಿಸಿ ಜನರಿಗೆ ಆಹಾರ, ತರಕಾರಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಿ ಎಂದು ಸಲಹೆ ನೀಡಿದರು.

ಪೆಟ್ರೋಲ್ ಬಂಕ್ ಮಾಲೀಕರು, ವರ್ತಕರು, ಸೇಲ್ಸ್ ಮ್ಯಾನ್‍ಗಳಿಗೆ, ಹಮಾಲರಿಗೆ ಪಾಸ್ ವಿತರಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.

ಎರಡು ತಿಂಗಳ ಪಡಿತರ

ನಾಳೆಯಿಂದ ಜಿಲ್ಲೆಯ ಎಲ್ಲ ಪಡಿತರ ಅಂಗಡಿಗಳ ಮೂಲಕ ಎರಡು ತಿಂಗಳ ಪಡಿತರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ವ್ಯವಸ್ಥಿತವಾಗಿ ವಿತರಣೆಯಾಗಬೇಕು. ನ್ಯಾಯಬೆಲೆ ಅಂಗಡಿಗಳಿಂದ ಮನೆಗೆ ಎರಡು ತಿಂಗಳ ಪಡಿತರ ಸಾಗಿಸಲು ಅನುಕೂಲವಾಗುವಂತೆ ಆಟೊ ಇತರ ವಾಹನಗಳಿಗೆ ಓಡಾಡಲು ಅನುಮತಿ ನೀಡಬೇಕು. ಪಾಸ್‍ಗಳನ್ನು ವಿತರಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಪ್‌ ಶಶಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿರೇಂದ್ರ ಕುಂದಗೋಳ, ತಹಶೀಲ್ದಾರ್‌ ಶಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.