ಹಾವೇರಿ: ಬೆಳೆ ಹಾನಿ ಪರಿಹಾರ ಮೊತ್ತ ಪಾವತಿಸಬೇಕು ಎಂದು ಕೆಇಬಿ ಹೆಸ್ಕಾಂ ವಿಭಾಗಕ್ಕೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಹಾವೇರಿ ತಾಲ್ಲೂಕಿನ ಎಂ.ಜಿ. ತಿಮ್ಮಾಪೂರ ಗ್ರಾಮದ ಡಿಳ್ಳೆಪ್ಪ ಪುಟ್ಟಪ್ಪ ಕತ್ತಿ ಅವರ ಜಮೀನಿನಲ್ಲಿ ಹಾದು ಹೋದ ವಿದ್ಯುತ್ ತಂತಿಗಳು ಶಿಥಿಲಗೊಂಡ ಕಾರಣ ದಿನಾಂಕ: 07-12-2019 ರಂದು ಗಾಳಿಗೆ ಒಂದಕ್ಕೊಂದು ತಾಗಿ ಶಾರ್ಟ್ ಸರ್ಕಿಟ್ ಉಂಟಾಗಿ ಎರಡು ಎಕರೆಯಲ್ಲಿ ಸಮೃದ್ಧವಾಗಿ ಬೆಳೆದ ಕಬ್ಬಿನ ಬೆಳೆ ಸುಟ್ಟುಹೋಗಿತ್ತ್ತು. ಬೆಳೆ ನಷ್ಟ ತುಂಬಿಕೊಡಲು ಹೆಸ್ಕಾಂಗೆ ಸೂಚಿಸಲು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷ ಈಶ್ವರಪ್ಪ ಬಿ.ಎಸ್ ಹಾಗೂ ಸದಸ್ಯೆ ಉಮಾದೇವಿ ಎಸ್.ಹಿರೇಮಠ ಅವರು ಕಬ್ಬಿನಬೆಳೆ ಹಾನಿಗಾಗಿ 30 ದಿನದೊಳಗಾಗಿ ₹2,97,851 ಪರಿಹಾರ ನೀಡಲು ಹಾಗೂ ಮಾನಸಿಕ ಹಾಗೂ ದೈಹಿಕ ವ್ಯಥೆಗೆ ₹2 ಸಾವಿರ ಪ್ರಕರಣದ ಖರ್ಚು, ₹2 ಸಾವಿರಗಳನ್ನು ಪಾವತಿಸಲು ಹೆಸ್ಕಾಂಗೆ ಆದೇಶಿಸಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 6ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಸೂಚನೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.