ಹಾವೇರಿ: ನಗರದ ಗುರು ಕುಮಾರೇಶ್ವರ ಧಾರ್ಮಿಕ ಪಾಠಶಾಲೆ ಮತ್ತು ಸಿಂದಗಿಮಠದ ಆಶ್ರಯದಲ್ಲಿ ಶಾಂತವೀರ ಪಟ್ಟಾಧ್ಯಕ್ಷರವರ 41ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಮಾರ್ಚ್ 7ರಿಂದ ಮಾರ್ಚ್ 13ರವರೆಗೆ ನಡೆಯಲಿದೆ ಎಂದು ಸಿಂದಗಿ ಮಠದ ವ್ಯವಸ್ಥಾಪಕ ಶಿವಬಸಯ್ಯ ಆರಾಧ್ಯಮಠ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಡಂಬಳ–ಗದಗದ ಯಡೆಯೂರು ತೋಂಟದಾರ್ಯಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.ಏಳೂ ದಿನ ಮಹಾತ್ಮರ ಜೀವನದರ್ಶನ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಮಾರ್ಚ್ 7ರಂದು ಸಂಜೆ 7.30ಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಾರ್ಚ್ 8ರಂದು ಸಂಜೆ 7.30ಕ್ಕೆ ಹಾಸ್ಯ ಚಟಾಕಿಗಳು, ಮಾರ್ಚ್ 9ರಂದು ಬೆಳಿಗ್ಗೆ 10.30ಕ್ಕೆ ಉಚಿತ ನೇತ್ರ ತಪಾಸಣಾ ಶಿಬಿರ, ಸಂಜೆ 7.30ಕ್ಕೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಾರ್ಚ್ 10ರಂದು ಬೆಳಿಗ್ಗೆ 10.30ಕ್ಕೆ ಉಚಿತ ಆರೋಗ್ಯ ತಪಾಸಣೆ, ಸಂಜೆ 7.30ಕ್ಕೆ ಹಾಸ್ಯ ಲೋಕ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 11ರಂದು ಮಹಾಶಿವರಾತ್ರಿ ಅಂಗವಾಗಿ ರಾತ್ರಿ 8.30ಕ್ಕೆ ಭಕ್ತಿ ಸಂಗೀತ, ಮಾರ್ಚ್ 12ರಂದು ಸಂಜೆ 7.30ಕ್ಕೆ ಪ್ರವಚನ ಮಂಗಲ ನಡೆಯಲಿದೆ ಎಂದರು.
ಬೆಳ್ಳಿ ಕವಚ ಉದ್ಘಾಟನೆ:
ಮಾರ್ಚ್ 12ರ ಸಂಜೆ 7.30ಕ್ಕೆ ಸಿಂದಗಿ ಮಠದಲ್ಲಿದ್ದ ಹಳೆಯ ವಿದ್ಯಾರ್ಥಿಗಳಿಂದ ಲಿಂ.ಸಿಂದಗಿ ಗುರುಗಳವರ ಗದ್ದುಗೆ, ಗದ್ದುಗೆ ಮಂಟಪ, ಗರ್ಭಗುಡಿ ಬಾಗಿಲು ಹಾಗೂ ಕದಗಳಿಗೆ ಒಟ್ಟು 60 ಕೆ.ಜಿ. ಬೆಳ್ಳಿಯಿಂದ ನಿರ್ಮಾಣಗೊಂಡ ‘ಬೆಳ್ಳಿ ಕವಚ ಉದ್ಘಾಟನೆ’ಯನ್ನು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನೆರವೇರಿಸಲಿದ್ದಾರೆ. ಮಾರ್ಚ್ 20ರಂದು ರಾತ್ರಿ 7.30ಕ್ಕೆ ‘ಊರೂಟ’ ನಡೆಯಲಿದ್ದು, ಸಕಲ ಭಕ್ತರು ಪ್ರಸಾದದಲ್ಲಿ ಭಾಗಿಗಳಾಗಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಯೋಗಿ ಹಿರೇಮಠ, ಜಿ.ಎಸ್.ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.