ಹಾವೇರಿ: ಲೋಕೋದ್ಧಾರ ಮತ್ತು ಆತ್ಮೋದ್ಧಾರದ ಸೌಹಾರ್ದಯುತ ಬದುಕಿಗೆ, ಸಂಸ್ಕಾರ ಸಂವರ್ಧನೆಗೆ ಶ್ರಾವಣ ಮಾಸದ ಪ್ರವಚನವು ನಮ್ಮ ಬದುಕಿಗೆ ಪ್ರೇರಕ ಶಕ್ತಿಯಾಗುತ್ತದೆ ಎಂದು ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಪ್ರೊ.ಕೋರಗಲ್ ವಿರೂಪಾಕ್ಷಪ್ಪ ವಿರಚಿತ ಶ್ರೀ ಶಿವಲಿಂಗೇಶ್ವರ ಪುರಾಣ ಪ್ರವಚನದ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಾವಣ ಮಾಸವು ಸಂಕ್ರಮಣದ ಕಾಲವಾಗಿದ್ದು, ಪ್ರಕೃತಿಯಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. ಮಳೆಯಿಂದ ಪ್ರಕೃತಿ ಹಚ್ಚ ಹಸಿರಿನಿಂದ ಕೂಡಿದ್ದು, ಮನುಷ್ಯನೂ ಸಹ ತನ್ನ ಗುಣ ಸ್ವಭಾವ ಬದಲಾವಣೆಗೆ ಸಕಾಲವಾಗಿದೆ. ಶ್ರಾವಣ ಮಾಸದ ಆಧ್ಯಾತ್ಮಿಕ ಚಿಂತನೆಯಿಂದ ತನ್ನಲ್ಲಿನ ದುರ್ಗಣ ಹೋಗಲಾಡಿಸಿ ಸನ್ನಡತೆ ಹೊಂದಲು ಸಕಾಲವಾಗಿದೆ ಎಂದು ಹೇಳಿದರು.
ಪ್ರೊ.ಕೋರಗಲ್ಲ ವಿರೂಪಾಕ್ಷಪ್ಪ ಮಾತನಾಡಿ, ‘ನಾನು ಕೇವಲ ಲಿಪಿಕಾರ ಮಾತ್ರ ಆಗಿದ್ದು, ಬರೆಸಿದವರು ಲಿಂ.ಶಿವಲಿಂಗ ಶ್ರೀಗಳು. ಬದುಕಿರುವಾಗಲೇ ತಮ್ಮ ಚರಿತ್ರೆಯನ್ನು ಪುರಾಣವಾಗಿಸಿ, ಅದನ್ನು ಕೇಳಿದ್ದು ಬಹುತೇಕ ಇತಿಹಾಸದಲ್ಲಿ ಇದೇ ಪ್ರಥಮ ಉದಾರಹಣೆಯಾಗಿದೆ ಎಂದು ಹೇಳಿದರು.
ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಮಾತನಾಡಿ, ಪುರಾಣವು ಕೇವಲ ಆಧ್ಯಾತ್ಮಿಕ ಮಾತ್ರವಲ್ಲ ಐತಿಹಾಸಿಕವೂ ಆಗಿದೆ. ಆತ್ಮೋದ್ಧಾರದ ಜೊತೆಗೆ ಸಮಾಜೋದ್ಧಾರ ಕಾರ್ಯ ಸದಾ ಸ್ಮರಣೀಯ. ಪ್ರವಚನದಿಂದ ಮನಸ್ಸು ಪ್ರಫುಲ್ಲವಾಗಿ ಧನಾತ್ಮಕ ಚಿಂತನೆ ಸಾಧ್ಯ ಎಂದು ಹೇಳಿದರು.
ಆಸಂಗಿಯ ವೀರಬಸವ ದೇವರು ಶಿವಲಿಂಗೇಶ್ವರ ಪುರಾಣವನ್ನು ಹೇಳಿದರು.ವೀರಣ್ಣ ಅಂಗಡಿ, ಎಸ್.ಆರ್.ಮಾಗನೂರ, ರಾಚಪ್ಪ ಲಂಬಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ವೀರಣ್ಣ ವಳಸಂಗದ, ಶಿವಯೋಗೆಪ್ಪ ಅರಣಿ, ಎಂ.ಸಿ.ಮಳಿಮಠ, ತಮ್ಮಣ್ಣ ಮುದ್ದಿ, ಜೆ.ಬಿ.ಸಾವಿರಮಠ. ಕೆ.ಆರ್. ನಾಶೀಪುರ, ಶಿವಕುಮಾರ ಹಡಗಲಿ, ಚನ್ನಪ್ಪ ಹಳಕೊಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.