ರಾಣೆಬೆನ್ನೂರು: ಮೇಡ್ಲೇರಿ ರಸ್ತೆಯ ಪಂಪಾನಗರದ ನಿವಾಸಿ ಪದ್ಮಾವತಿ (ಹರ್ಷಿತಾ) ಕುರುವತ್ತಿ ಅವರು ತಮ್ಮ 42ನೇ ವಯಸ್ಸಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣಗೊಂಡಿದ್ದಾರೆ.
ತವರು ಮನೆಯಾದ ತಾಲ್ಲೂಕಿನ ದೇವರಗುಡ್ಡದಲ್ಲಿರುವ ಮಾಲತೇಶ ಪ್ರೌಢಶಾಲೆಯಲ್ಲಿ ಖಾಸಗಿ ಅಭ್ಯರ್ಥಿಯಾಗಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಬರೆದಿದ್ದ ಅವರು ಶೇ 48.48ರಷ್ಟು ಫಲಿತಾಂಶ ಪಡೆದಿದ್ದಾರೆ.
ಪದ್ಮಾವತಿ ಅವರು 9ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ನಂತರ, ಅವರಿಗೆ ಕೊಟ್ರೇಶಪ್ಪ ಜೊತೆ ಮದುವೆಯಾಗಿತ್ತು. ಮದುವೆ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆ ಪಾಸಾಗಬೇಕೆಂಬುದು ಅವರ ಹಂಬಲವಾಗಿತ್ತು.
ಅವರ ಮಗ ಭೂಷಣ, ಬೆಂಗಳೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಪುತ್ರಿ ಸುಚಿತ್ರಾ, ಮೈಸೂರಿನಲ್ಲಿರುವ ಕಂಪನಿಯೊಂದರ ಉದ್ಯೋಗಿ. ಪತ್ನಿಯ ಹಂಬಲವನ್ನು ಈಡೇರಿಸಲು ಪತಿ ಕೊಟ್ರೇಶಪ್ಪ ಸಹಕಾರ ನೀಡಿದ್ದರು.
‘ಮನೆಯಲ್ಲಿ ಓದಲು ನನ್ನ ಪತಿ ಹಾಗೂ ಸಹೋದರರಾದ ಶ್ರೀಕಾಂತ ಮತ್ತು ಮಾಲತೇಶ ಬೆಟಗೇರಿ ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಿದರು. ಮುಂದೆ ಪ್ಯಾರಾಮೆಡಿಕಲ್ ಕೋರ್ಸ್ ಮಾಡುವ ಆಸೆ ಇದೆ’ ಎಂದು ಪದ್ಮಾವತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
Quote - ಎಸ್ಎಸ್ಎಲ್ಸಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಮಹಿಳೆಯರಿಗೆ ಪದ್ಮಾವತಿ ಪ್ರೇರಣೆಯಾಗಿದ್ದಾರೆ. ಶ್ಯಾಮಸುಂದರ ಅಡಿಗ ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.