ADVERTISEMENT

ಸೀಮಂತ ಕಾರ್ಯಕ್ರಮದಲ್ಲಿ ಸಸಿ ನೀಡಿ ಪರಿಸರ ಜಾಗೃತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 6:34 IST
Last Updated 9 ಅಕ್ಟೋಬರ್ 2020, 6:34 IST
ಶಿಗ್ಗಾವಿ ತಾಲ್ಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದಲ್ಲಿ ಸುಪ್ರಿಯಾ ಎಂಬುವರ ಸೀಮಂತ ಕಾರ್ಯಕ್ರಮದಲ್ಲಿ ಸಂಬಂಧಿಗಳಿಗೆ ಸಸಿ ವಿತರಿಸಲಾಯಿತು
ಶಿಗ್ಗಾವಿ ತಾಲ್ಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದಲ್ಲಿ ಸುಪ್ರಿಯಾ ಎಂಬುವರ ಸೀಮಂತ ಕಾರ್ಯಕ್ರಮದಲ್ಲಿ ಸಂಬಂಧಿಗಳಿಗೆ ಸಸಿ ವಿತರಿಸಲಾಯಿತು   

ಶಿಗ್ಗಾವಿ: ತಾಲ್ಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದಲ್ಲಿ ಇತ್ತೀಚೆಗೆ ಸಂತೋಷ ಕುಮಾರಯ್ಯ ಪತ್ನಿ ಸುಪ್ರಿಯಾ ಸೀಮಂತ ಕಾರ್ಯಕ್ರಮದಲ್ಲಿ ಸಂಬಂಧಿಗಳಿಗೆ ಸಸಿ ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

ಸಂತೋಷ ಕುಮಾರಯ್ಯ ಅವರ ಪತ್ನಿ ಸುಪ್ರಿಯಾ ಪರಿಸರ ಪ್ರೇಮಿಯಾಗಿದ್ದು, ಕಳೆದ ವರ್ಷದಲ್ಲಿ ನಡೆದ ಅವರ ವಿವಾಹ ಸಮಾರಂಭದಲ್ಲಿ ಸಂಬಂಧಿಗಳಿಗೆ ನೆನಪಿನ ಕಾಣಿಕೆಯಾಗಿ ಮಾವಿನ ಸಸಿಗಳನ್ನು ವಿತರಿಸಿದ್ದರು. ಈಗ ನಡೆದ ಅವರ ಸೀಮಂತ ಕಾರ್ಯಕ್ರಮದಲ್ಲಿ ವಿಶೇಷ ಕಾಳಜಿ ವಹಿಸಿ ಬಂಧು– ಬಾಂಧವರಿಗೆ ವಿವಿಧ ತಳಿಗಳ ಸಸಿಗಳನ್ನು ವಿತರಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಸುಪ್ರಿಯಾ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಉತ್ತಮ ಪರಿಸರದಿಂದ ಆರೋಗ್ಯಯುತ ನಾಡು ನಿರ್ಮಾಣವಾಗಲು ಸಾಧ್ಯವಿದೆ. ಮಕ್ಕಳ ಪಾಲನೆ– ಪೋಷಣೆ ಮಾಡಿದಂತೆ ಪ್ರತಿ ಸಸಿಗಳನ್ನು ಬೆಳೆಸಬೇಕು. ಅದರಿಂದ ನಾಡಿಗೆ ಉತ್ತಮ ಸಂದೇಶ ನೀಡಬೇಕೆಂಬ ಉದ್ದೇಶದಿಂದ ಈ ಸಸಿಗಳು ವಿತರಿಸುವ ಜತೆಗೆ ನಾವು ಸಸಿಗಳನ್ನು ನೆಟ್ಟು ಅವುಗಳು ಬೆಳೆಯುವ ವರೆಗೆ ಕಾಳಜಿ ವಹಿಸುತ್ತೇವೆ ಎಂದರು.

ADVERTISEMENT

ಶಿಗ್ಗಾವಿ ಎಪಿಎಂಸಿ ಸದಸ್ಯ ತಿಪ್ಪಣ್ಣ ಸಾತಣ್ಣವರ, ಗ್ರಾಮ ಪಂಚಾಯ್ತಿ ಸದಸ್ಯ ರಮೇಶ ಸಾತಣ್ಣವರ, ಜನಪದ ಕಲಾವಿದ ಗದಿಗಯ್ಯ ಹಿರೇಮಠ ಸೇರಿದಂತೆ ಸುತ್ತಲಿನ ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.