ಅಕ್ಕಿಆಲೂರ: ‘ಉರಿಬಿಸಿಲಿನಲ್ಲಿ ಇಷ್ಟು ಜನ ಸೇರಿದ್ದೀರಿ. ನಿಮಗೆ ನೆರಳು ಮಾಡಬೇಕು ಎಂದು ನಮಗೆ ಮನಸ್ಸಿದೆ. ಆದರೆ ಚುನಾವಣಾ ಆಯೋಗದವರು ಇಷ್ಟೇ ಖರ್ಚು ಮಾಡಿ, ಹೀಗೇ ಸಭೆ ಮಾಡಿ ಅಂತ ಹೇಳಿದ್ದಾರೆ. ಅದಕ್ಕೆ ನಿಮಗೆ ನೆರಳು ಮಾಡಲು ಆಗಿಲ್ಲ, ಕ್ಷಮಿಸಿ’ ಎಂದು ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ವೇಳೆ ಸೇರಿದ್ದ ಜನರಲ್ಲಿ ಕೇಳಿಕೊಂಡರು.
ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಹೇರೂರಿನಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಟಗರು ಎಂದ ಅಭಿಮಾನಿಗಳು: ‘ಮಾಸ್ಕ್ ತೆಗೆಯಿರಿ ಮುಖ ನೋಡಬೇಕು ಎಂದ ಜನತೆ ಕೂಗಿದಾಗ ಸಿದ್ದರಾಮಯ್ಯ ಅವರು ಮಾಸ್ಕ್ ತೆಗೀಬೇಕಾ? ಈಗ ಕಾಣಿಸ್ತಾ ಇದೀನಾ’ ಎಂದರು. ಸಿದ್ದರಾಮಯ್ಯ ಮಾತಿಗೆ ಕೇಕೆ ಹಾಕಿ ‘ಟಗರು’ ಎಂದು ಅಭಿಮಾನಿಗಳು ಕೂಗಿದರು.
ಪುಷ್ಪವೃಷ್ಟಿ: ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಪ್ರಚಾರಕ್ಕೆ ಬಂದ ಸಿದ್ದರಾಮಯ್ಯ ಅವರಿಗೆ ಹೇರೂರು ಗ್ರಾಮದಲ್ಲಿ ಜೆಸಿಬಿ ಮೂಲಕ ಅಭಿಮಾನಿಗಳು ಪುಷ್ಪವೃಷ್ಟಿ ಗರೆದರು. ಎರಡು ಜೆಸಿಬಿ ಯಂತ್ರಗಳ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದ ಸಿದ್ದರಾಮಯ್ಯ ಗ್ರಾಮ ದೇವತೆ ದ್ಯಾಮವ್ವದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.