ಹಾವೇರಿ: ನಗರದ ಹೊಸಮಠದ ಬಸವಕೇಂದ್ರದಲ್ಲಿಕಾಯಕಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಅನುಭವ ಮಂಟಪದ ಆಧಾರಸ್ತಂಭದಂತಿದ್ದ ಸಿದ್ದರಾಮೇಶ್ವರ ಅವರು ವಚನ ಸಾಹಿತ್ಯ ರಕ್ಷಣೆಯ ಕಾರ್ಯದಲ್ಲೂ ಶ್ರಮಿಸಿದರು. ಸಮಾನತೆಯ ಸಾಕಾರರೂಪ ಶಿವಯೋಗಿ ಸಿದ್ಧರಾಮೇಶ್ವರರ ಜೀವನ ಮತ್ತು ಕಾಯಕತತ್ವ ಅನುಕರಣೀಯವಾದುದು. ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ವಚನಾಂಕಿತದಿಂದ ಸಮಾಜದ ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು ಎಂದು ಬಣ್ಣಿಸಿದರು.
‘ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಜೀವನ ನಿರ್ವಹಣೆಗಾಗಿ ದುಡಿಮೆ ಮಾಡಬೇಕು. ಕೇವಲ ಹೊಟ್ಟೆಪಾಡಿಗಾಗಿ ಮಾಡುವ ಕೆಲಸ ವೃತ್ತಿ ಎನಿಸುತ್ತದೆ. ಮಾಡುವ ಕೆಲಸದಿಂದ ವ್ಯಕ್ತಿಗೂ, ಸಮಾಜಕ್ಕೂ ಉಪಕಾರವಾಗುವಂತಿರಬೇಕು ಮತ್ತು ಸಮಾಜದ ಅವಕಾಶಗಳನ್ನು ಪೂರೈಸುವಂತಿರಬೇಕು. ಇಂಥ ಕೆಲಸವನ್ನೇ ಸಮರ್ಪಣಾಭಾವದಿಂದ ಪೂಜೆ ಎಂದು ಮಾಡಿದಲ್ಲಿ ಅದು ಕಾಯಕ ಎನಿಸುತ್ತದೆ. ಕಾಯಕದಿಂದ ಬಂದ ಹಣ ಜಂಗಮ ದಾಸೋಹಕ್ಕಾಗಿ ವಿನಿಯೋಗವಾಗಬೇಕು’ ಎಂದರು.
ಹಾವೇರಿಯ ಭೋವಿ ಸಮಾಜದ ಮುಖಂಡ ಮಲ್ಲಿಕಾರ್ಜುನ ಕಟ್ಟಿಮನಿ, ಚನ್ನಬಸಪ್ಪ ಹಾವೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.