ADVERTISEMENT

ಸಾರಿಗೆ ಸಂಸ್ಥೆ ನಿವೃತ್ತ ನೌಕರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 15:23 IST
Last Updated 2 ಸೆಪ್ಟೆಂಬರ್ 2020, 15:23 IST
ಶಿವಪ್ರಕಾಶ ಹೂಗಾರ
ಶಿವಪ್ರಕಾಶ ಹೂಗಾರ   

ಹಾವೇರಿ: ನಗರದ ವಾಯವ್ಯ ಸಾರಿಗೆ ಸಂಸ್ಥೆ ಡಿಪೊ ಮುಂಭಾಗ ನಿವೃತ್ತ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.

ಶಿಗ್ಗಾವಿಯ ಶಿವಪ್ರಕಾಶ ಯಲ್ಲಪ್ಪ ಹೂಗಾರ (61) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

2019ರ ಮೇ 31ಕ್ಕೆ ನಿವೃತ್ತರಾಗಿದ್ದ ಶಿವಪ್ರಕಾಶ ಅವರು ಸಾರಿಗೆ ಸಂಸ್ಥೆಯಿಂದ ಬರಬೇಕಾಗಿದ್ದ ಗ್ರಾಚ್ಯುಟಿ ಹಾಗೂ ಎನ್‌ಕ್ಯಾಶ್‌ಮೆಂಟ್‌ ಹಣ ಪಡೆಯಲು ಆಗಾಗ್ಗೆ ನಗರದ ಡಿಪೊಗೆ ಬರುತ್ತಿದ್ದರು.

ADVERTISEMENT

ಮಂಗಳವಾರ ಡಿಪೊಗೆ ಬಂದು ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ನಂತರ ಸ್ನೇಹಿತರು ಮತ್ತು ಸಂಸ್ಥೆಯಲ್ಲೇ ಕಾರ್ಯನಿರ್ವಹಿಸುತ್ತಿರುವ ಸಹೋದರನೊಂದಿಗೆ ಮಾತುಕತೆ ನಡೆಸಿದ್ದರು. ನಂತರ ಮಂಗಳವಾರ ಮಧ್ಯರಾತ್ರಿ ಡಿಪೊ ಮುಂಭಾಗವಿರುವ ಹೋಟೆಲ್‌ನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ಮನೆ ಕಟ್ಟಲು ಯೋಜನೆ ಹಾಕಿಕೊಂಡಿದ್ದರು. ಈ ಸಂಬಂಧ ಸಾರಿಗೆ ಸಂಸ್ಥೆಯಿಂದ ಬರಬೇಕಿದ್ದ ಬಾಕಿ ಹಣಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದರು. ನಿವೃತ್ತರಾಗಿ ಒಂದೂ ಕಾಲು ವರ್ಷವಾದರೂ ಬಾಕಿ ಹಣ ಬರಲಿಲ್ಲ ಎಂದು ನೊಂದುಕೊಂಡಿದ್ದರು. ಆತ್ಮಹತ್ಯೆಗೆ ಶರಣಾಗಿ ನಮ್ಮನ್ನು ಬೀದಿಪಾಲು ಮಾಡಿ ಹೊರಟು ಹೋಗಿದ್ದಾರೆ’ ಎಂದು ಪುತ್ರಿಯರು ಕಣ್ಣೀರು ಹಾಕಿದರು.

ಶಿವಪ್ರಕಾಶ ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.