ಹಾವೇರಿ: ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದ ಕಾರಣ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಹಿನ್ನೆಡೆಯಾಗಬಾರದು ಎಂಬ ಕಾರಣದಿಂದ ಮನೆಯಲ್ಲಿ ವ್ಯಾಸಂಗ ಮಾಡಲು ಸರ್ಕಾರದ ನಿರ್ಧಾರದಂತೆ ಶಾಸಕ ನೆಹರು ಓಲೇಕಾರ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡು ಪಠ್ಯಪುಸ್ತಕಗಳನ್ನು ಪಡೆದರು. ಐದೈದು ಮಕ್ಕಳು ಶಾಲೆಗೆ ಬಂದು ಅಂತರ ಕಾಯ್ದುಕೊಂಡು ಪಠ್ಯಪುಸ್ತಕ ಪಡೆಯಲು ಶಿಕ್ಷಣ ಇಲಾಖೆ ಕೈಮ ಕೈಗೊಂಡಿತ್ತು.
‘ಕೊರೊನಾ ವೈರಾಣುವಿನ ಸಂಕಷ್ಟ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ಸುರಕ್ಷತೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಅಭ್ಯಾಸ ಮಾಡಿ, ಸಮಯ ವ್ಯರ್ಥ ಮಾಡಬೇಡಿ. ಶಾಲೆ ಆರಂಭವಾಗುವವರೆಗೂ ಕಲಿಕೆ ನಿರಂತರವಾಗಿರಲಿ’ ಎಂದು ಶಾಸಕರು ಮಕ್ಕಳಿಗೆ ಸಲಹೆ ನೀಡಿದರು.
ಹಾವೇರಿ ತಾಲೂಕಿನ ಯತ್ತಿನಹಳ್ಳಿ, ಅಗಡಿ, ಹಳೇರಿತ್ತಿ, ಹೊಸರಿತ್ತಿ ಗ್ರಾಮಗಳ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿ ಕೊರೊನಾ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತಂತೆ ಮಕ್ಕಳಿಗೆ ಹಾಗೂ ಪಾಲಕರಿಗೆ ಅರಿವು ಮೂಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಿಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ತಾಲೂಕಾ ದೈಹಿಕ ಶಿಕ್ಷಣ ಅಧಿಕಾರಿ ನಾಗರಾಜ ಎನ್. ಇಚ್ಚಂಗಿ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್. ಭಗವಂತಗೌಡ್ರ, ವಲಯದ ಶಿಕ್ಷಣ ಸಂಯೋಜಕರು, ಸಿ.ಆರ್.ಪಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.