ಹಿರೇಕೆರೂರು: ನಿರಂತರ ಮಳೆಯಿಂದ ತಾಲ್ಲೂಕಿನ ಎಲ್ಲ ಕೆರೆ ಕಟ್ಟೆಗಳು ತುಂಬಿವೆ. ಬರೀ ಮಲೆನಾಡಿಗೆ ಸೀಮಿತವಾಗಿದ್ದ ಭತ್ತ ಅರೆ ಮಲೆನಾಡಿಗೂ ಕಾಲಿಟ್ಟಿದೆ.
ತಾವರಗಿ, ಕಚವಿ, ಹಂಸಭಾವಿ, ರಟ್ಟೀಹಳ್ಳಿ ಸೇರಿದಂತೆ ಹಲವು ಕಡೆ ಭತ್ತ ನಾಟಿ ಮಾಡಲು ರೈತರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಹಿರೇಕೆರೂರು ತಾಲ್ಲೂಕಿನಲ್ಲಿ ಬೆಳೆಯುವ ಹತ್ತಿ, ಮೆಕ್ಕೆಜೋಳ ಶೇಂಗಾ ಸೇರಿದಂತೆ ಇತರ ಬೆಳೆಗಳಿಗೆ ಮಳೆ ಹೆಚ್ಚಾಗಿ ಬೆಳೆಗಳೆಲ್ಲವು ಹಾಳಾಗಿವೆ. ಇದರಿಂದ ಕೆರೆಯ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರು ಭತ್ತವನ್ನು ಬೆಳೆಯಲು ಮುಂದಾಗಿದ್ದಾರೆ. ಅಲ್ಲದೆ ಈಚೆಗೆ ಮೂರು ನಾಲ್ಕು ವರ್ಷಗಳಲ್ಲಿ ಮಳೆಯೂ ಉತ್ತಮವಾಗಿ ಬೀಳುತ್ತಿರುವುದರಿಂದ ಭತ್ತದ ಬೆಳೆಯತ್ತ ತಾಲ್ಲೂಕಿನ ರೈತರು ಚಿತ್ತವನ್ನು ಹರಿಸಿದ್ದಾರೆ.
ರೈತ ಸುಭಾಸ ಮಾತನಾಡಿ, ಜೋಳ ಬೆಳೆದಿದ್ದೇವೆ. ಆದರೆ. ಮಳೆ ಹೆಚ್ಚಾಗಿದ್ದರಿಂದ ಅದು ಸಂಪೂರ್ಣವಾಗಿ ನಾಶವಾಗಿದೆ. ಅದನ್ನು ತೆಗೆದು ನಾವು ಎಂಟು ಎಕರೆಯಲ್ಲಿ ಭತ್ತವನ್ನು ನಾಟಿ ಮಾಡಿದ್ದೇವೆ. ಪಕ್ಕದಲ್ಲಿ ಶ್ರೀ ದುರ್ಗಾದೇವಿ ಕೆರೆ ತುಂಬಿದ್ದು, ಮುಂದಿನ ದಿನಗಳಲ್ಲಿ ಕೆರೆಯಿಂದ ಭತ್ತಕ್ಕೆ ನೀರು ಹರಿಸಲಾಗುವುದು ಎಂದರು.
ಹಿರೇಕೆರೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ವಿ.ಮಂಜುನಾಥ ಮಾತನಾಡಿ, ಈ ವರ್ಷ 3 ಸಾವಿರದಿಂದ 4,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬರಹುದು ಎಂದು ಅಂದಾಜಿಸಲಾಗಿದೆ. ಭತ್ತ ನಾಟಿ ಮಾಡಿದ 15 ರಿಂದ 20 ದಿನಗಳ ನಂತರದಲ್ಲಿ ಹುಳುಮರಿ ಕಾಂಡಕೊರೆದು ತಿನ್ನುವುದರಿಂದ. ಇದರಿಂದ ಹೆಚ್ಚಿನ ಹಾನಿ ಸಂಭವಿಸುತ್ತದೆ. ಔಷಧೋಪಚಾರ ಹಾಗೂ ಸರಿಯಾದ ಗೊಬ್ಬರ ನೀಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.