ಹಾವೇರಿ: ಖರೀದಿಯಲ್ಲಿ ನಡೆಯುವ ಮೋಸದ ಕುರಿತು ಅರಿವು ಮೂಡಿಸಬೇಕು. ನಂಬಿಕೆಗೆ ಅರ್ಹವಾದ ವಸ್ತುಗಳನ್ನು ಮಾತ್ರ ಖರೀದಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.
ಇಲ್ಲಿಗೆ ಸಮೀಪದ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಗ್ರಾಹಕರ ಹಕ್ಕುಗಳ ದಿನದ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲೇ ದೇಶವು ಅತಿಹೆಚ್ಚು ಜನಸಂಖ್ಯೆ ಹೊಂದಿದ್ದು, ವಿದೇಶಿ ಕಂಪೆನಿಗಳು ಮಾರುಕಟ್ಟೆಗೆ ಇಲ್ಲಿ ಆದ್ಯತೆ ನೀಡಿವೆ. ಅದಕ್ಕಾಗಿ, ಬಣ್ಣ ಬಣ್ಣದ ಜಾಹೀರಾತುಗಳನ್ನು ನೀಡಿ, ಪ್ರಚಾರ ಮಾಡುತ್ತಿದ್ದಾರೆ. ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರವಾಸಿ ಸ್ಥಳಗಳ ಕುರಿತೂ ಅಸಮರ್ಪಕ ಮಾಹಿತಿ ಹಾಕಿ ಆಕರ್ಷಿಸಲು ಯತ್ನಿಸುತ್ತಿದ್ದಾರೆ. ಎಚ್ಚರಿಕೆ ವಹಿಸಬೇಕು ಎಂದರು.
ಇ–ಕಾಮರ್ಸ್ ಕಂಪೆನಿಗಳಿಂದ ಆನ್ಲೈನ್ನಲ್ಲಿ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಖರೀದಿಸುತ್ತೆವೆ. ಕೆಲವು ಕಂಪೆನಿಗಳು ಮೋಸ ಮಾಡಿದ ಬಗ್ಗೆ ದೂರುಗಳಿವೆ.ಈ ಕುರಿತು ಗ್ರಾಹಕರು ಎಚ್ಚರವಹಿಸಬೇಕು. ಖರೀದಿಸುವಾಗ ಯೋಚಿಸಬೇಕು ಎಂದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್.ಎಚ್.ರೇಣುಕಾದೇವಿ ಮಾತನಾಡಿ, ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಚಲಾಯಿಸಬೇಕು. ಉತ್ತಮ ನಡವಳಿಕೆ ಪ್ರದರ್ಶಿಸಬೇಕು ಎಂದರು.
ಬದುಕಿನಲ್ಲಿ ವಿದ್ಯಾರ್ಥಿ ಜೀವನ ಒಂದೇ ಬಾರಿ ಬರುತ್ತದೆ. ಉತ್ತಮ ಶಿಕ್ಷಣ ಪಡೆಯಬೇಕು. ಸಮಯ ಮತ್ತು ಸಮಾಜಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಸಂವಿಧಾನವನ್ನು ಓದುವುದು ಮತ್ತು ತಿಳಿದುಕೊಳ್ಳುವುದು ನಮ್ಮ ಹಕ್ಕು ಎಂದರು.
ತೂಗುವ ತಕ್ಕಡಿ, ವಿದ್ಯುನ್ಮಾನ ತೂಕ, ತೂಕದ ಕಲ್ಲಿನಲ್ಲಿ ಮಾಡುವ ಮೋಸದ ಕುರಿತು ಆಯುಬ್ಖಾನ್ ಪ್ರಾತ್ಯಕ್ಷಿಕೆ ನೀಡಿದರು.
ವಕೀಲರಾದ ವಿ.ವಿ. ಸಪ್ಪಣ್ಣನವರ ‘ಗ್ರಾಹಕ ಹಕ್ಕು ಕಾಯ್ದೆ’, ರೆಹಾನಾ ಚೆನ್ನಪಟ್ಟಣ ‘ಮೂಲಭೂತ ಕಾನೂನು’ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಎಂ.ಐ.ಗೌಡಪ್ಪಗೌಡ್ರ ಪೊಲೀಸ್ ದೂರು ಪ್ರಾಧಿಕಾರದ ರಚನೆ, ಮಹತ್ವ ಮತ್ತು ಕಾರ್ಯದ ಕುರಿತು ಉಪನ್ಯಾಸ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈ.ಎಲ್. ಲಾಡಖಾನ್, ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ಸುನಂದಾ ದುರ್ಗೇಶ, ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಡಿ.ವೈಎಸ್ಪಿ ಎಲ್. ಕುಮಾರಪ್ಪ, ಪ್ರಾಂಶುಪಾಲ ಬಿ.ಪ್ರಕಾಶ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್, ಕಾನೂನ ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಟಿ.ಲೋಕೆಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.