ಬೆಂಗಳೂರು: ‘ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಇದ್ದರೂ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ ಪ್ರಕರಣ ಗಳಿಗೆ ಕಡಿವಾಣ ಬಿದ್ದಿಲ್ಲ’ ಎಂದು ಆಜಾದ್ ಸೇನೆ ಸಂಸ್ಥಾಪಕ ಅಧ್ಯಕ್ಷ ಸುಭಾಷ್ ಹೇಳಿದರು.
ಅತ್ಯಾಚಾರ ಪ್ರಕರಣವೊಂದನ್ನು ಉಲ್ಲೇಖಿಸಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸಂತ್ರಸ್ತೆ ಕಣ್ಣೀರು ಹಾಕುವುದು ಬೇಡ. ಅವರು ಜೀವಂತ ಇರುವಾಗಲೇ ಸಹಾಯ ಮಾಡಬೇಕಿದೆ’ ಎಂದರು.
ಇದೇ ವೇಳೆ ಮಾತನಾಡಿದ ಸಂತ್ರಸ್ತೆಯ ತಾಯಿ, ‘ಮಗಳಿಗೆ ಒಂಬತ್ತು ವರ್ಷವಾಗಿದ್ದಾಗ ಸಂಬಂಧಿಯೊಬ್ಬ ಅತ್ಯಾಚಾರ ಎಸಗಿದ್ದ. ಅದು ಎರಡು ತಿಂಗಳವರೆಗೂ ನಡೆದಿತ್ತು. ಮಗಳಿಗೆ ‘ನಿನ್ನ ತಾಯಿಗೆ ಚಾಕುವಿನಿಂದ ಇರಿದು ಕೊಲ್ಲುತ್ತೇನೆ’ ಎಂದು ಬೆದರಿಕೆ ಒಡ್ಡಿ ಸುಮ್ಮನಾಗಿಸಿದ್ದ’ ಎಂದರು.
‘ಕೆಲ ದಿನಗಳ ಬಳಿಕ ಮಗಳು ನನಗೆ ಈ ವಿಷಯ ತಿಳಿಸಿದಳು. ಆಗ ನಾನು ಮಕ್ಕಳ ಸಹಾಯವಾಣಿಗೆ ಮಾಹಿತಿ ಕೊಟ್ಟಿದ್ದೆ. ಆದರೆ ಪ್ರಯೋಜನ ಆಗಲಿಲ್ಲ. ಪೊಲೀಸ್ ಠಾಣೆಗೂ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಂದಿನಿಂದ ಇಂದಿನವರೆಗೂ ನನಗೆ ಆರೋಪಿ ಕಡೆಯಿಂದ ಜೀವ ಬೆದರಿಕೆಯ ಕರೆಗಳು ಬರುತ್ತಿವೆ. ಕೃತ್ಯ ನಡೆದು ನಾಲ್ಕು ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ’ ಎಂದು ಘಟನೆ ವಿವರಿಸಿದರು.
‘ನನ್ನ ಮಗಳಿಗೆ ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದ ಯಾರೂ ಇಂದು ನನ್ನ ನೆರವಿಗೆ ಬರುತ್ತಿಲ್ಲ. ಏನೇ ಆದರೂ ನಾನು ದೂರು ವಾಪಸು ಪಡೆಯುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.